Publish Date: Sun, 28 Apr 2019 (17:21 IST)
Updated Date: Sun, 28 Apr 2019 (17:23 IST)
ರಾಜ್ಯದ ರಾಜಕೀಯ ಪರಿಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತಿದೆ. ಸದ್ಯದ ರಾಜಕೀಯ ಪರಿಸ್ಥಿತಿಗೆ ಪರಿಹಾರ ಹುಡುಕಬೇಕಿದೆ. ಹೀಗಂತ ಕೈ ಪಾಳೆಯದ ಶಾಸಕರೊಬ್ಬರು ಹಲವು ಶಾಸಕರಿಗೆ ಪತ್ರ ಬರೆಯುವ ಮೂಲಕ ಸಿಡಿದೆದ್ದಿದ್ದಾರೆ.
ಕಾಂಗ್ರೆಸ್ ಶಾಸಕರಿಗೆ ಪತ್ರ ಬರೆದಿದ್ದಾರೆ ಶಾಸಕ ಎಸ್. ಟಿ. ಸೋಮಶೇಖರ್. ಮಂಗಳವಾರ ಶಾಸಕರ ಸಭೆಯನ್ನು ಕರೆದಿದ್ದಾರೆ.
ರಾಜಕೀಯ ಪರಿಸ್ಥಿತಿ ದಿನೇ ದಿನೇ ಹದಗೆಡುತ್ತಿದೆ. ಪ್ರಸಕ್ತ ರಾಜಕೀಯ ವಿದ್ಯಮಾನಗಳ ಬಗ್ಗೆ ಚರ್ಚೆ ಮಾಡಲು ಸಭೆ ಕರೆಯಲಾಗಿದೆ ಎಂದಿದ್ದಾರೆ.
ಈ ಮೂಲಕ ಸರ್ಕಾರದ ವಿರುದ್ಧ ಕಾಂಗ್ರೆಸ್ ಶಾಸಕರಿಂದಲೇ ಸಿದ್ಧವಾಗ್ತಿದೆಯಾ ವೇದಿಕೆ? ಎನ್ನುವ ಅನುಮಾನ ಕಾಡಲಾರಂಭಿಸಿದೆ.
ಸಮಾನ ಮನಸ್ಕ ಶಾಸಕರ ಸಭೆ ಕರೆದ ಶಾಸಕ ಎಸ್. ಟಿ. ಸೋಮಶೇಖರ್, ಶಾಸಕರೆಲ್ಲ ಒಂದುಗೂಡಿ ಚರ್ಚೆ ಮಾಡೋಣ ಅಂತ ಆಪ್ತ ಶಾಸಕರಿಗೆ ಪತ್ರ ಬರೆದಿದ್ದಾರೆ.
ಮಂಗಳವಾರ ಬೆಳಗ್ಗೆ ಖಾಸಗಿ ಹೊಟೇಲ್ ನಲ್ಲಿ ಸಭೆ ಕರೆದ ಎಸ್. ಟಿ. ಸೋಮಶೇಖರ್ ನೇತೃತ್ವದ ಸಭೆಯಲ್ಲಿ ಎಲ್ಲ ನಿಗಮ ಮಂಡಳಿಗಳ ಅಧ್ಯಕ್ಷರು, ನಿಗಮ ಮಂಡಳಿಗಳಿಂದ ವಂಚಿತರಾದ ಶಾಸಕರು, ಅತೃಪ್ತರು ಸಭೆಗೆ ಹಾಜರಾಗೋ ಸಾಧ್ಯತೆ ಕಂಡುಬರುತ್ತಿದೆ.