Publish Date: Fri, 30 Nov 2018 (18:30 IST)
Updated Date: Fri, 30 Nov 2018 (18:31 IST)
ಅವರಿಬ್ಬರು ಒಂದೇ ಪಕ್ಷದ ಪ್ರಮುಖ ನಾಯಕರು. ಸಚಿವರೂ ಹೌದು. ಆದರೆ ಅವರಿಬ್ಬರ ನಡುವೆ ಆರಂಭಗೊಂಡಿರುವ ಶೀಥಲ ಸಮರ ಇದುವರೆಗೂ ಕೊನೆಯಾಗಿಲ್ಲ. ಪರಸ್ಪರ ಆರೋಪ ಪ್ರತ್ಯಾರೋಪಗಳು ಸದ್ದಿಲ್ಲದೇ ಮುಂದುವರಿದಿವೆ.
ಸಚಿವ ಡಿ.ಕೆ. ಶಿವಕುಮಾರ್ ಹಾಗೂ ಸಚಿವ ರಮೇಶ್ ಜಾರಕಿಹೊಳಿ ನಡುವಿನ ಮುಸುಕಿನ ಗುದ್ದಾಟ ಮುಂದುವರೆದಿದೆ. ಕೆಲವು ಶಾಸಕರು ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಮುಂಬೈಗೆ ತೆರಳುತ್ತಾರೆ ಎಂಬ ವರದಿಗಳ ಹಿಂದೆ ಪ್ರಭಾವಿ ಸಚಿವರ ಕೈವಾಡವಿದೆ ಎಂದು ಸಚಿವ ರಮೇಶ್ ಜಾರಕಿಹೊಳಿ ಪರೋಕ್ಷವಾಗಿ ಡಿ.ಕೆ. ಶಿವಕುಮಾರ್ ವಿರುದ್ಧ ಹರಿಹಾಯ್ದಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ರಮೇಶ್ ಜಾರಕಿಹೊಳಿ, ತಾವು ಸೇರಿದಂತೆ ಕೆಲವು ಶಾಸಕರಲ್ಲಿ ಗೊಂದಲ, ಸಮಸ್ಯೆಗಳು ಇದ್ದದ್ದು ನಿಜ. ಆ ಸಮಸ್ಯೆಗಳನ್ನೆಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಹುಲ್ಗಾಂಧಿ, ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಬಗೆಹರಿಸಿದ್ದಾರೆ. ಈಗ ಯಾವುದೇ ಸಮಸ್ಯೆಗಳಿಲ್ಲ ಎಂದು ಸ್ಪಷ್ಟಪಡಿಸಿದರು.
ನಮ್ಮದೇ ಪಕ್ಷದ ನಾಯಕರೊಬ್ಬರು ತಮ್ಮ ಹೆಸರನ್ನು ಕೆಡಿಸಲು ಪದೇ ಪದೇ ಈ ರೀತಿ ವರದಿಗಳು ಬರುವಂತೆ ನೋಡಿಕೊಳ್ಳುತ್ತಿದ್ದಾರೆ. ಮಾಧ್ಯಮದವರು ಇಂಥ ವರದಿಗಳನ್ನು ಮಾಡುವಾಗ ಎಚ್ಚರ ವಹಿಸಬೇಕು ಎಂದು ಅವರು ಹೇಳಿದರು.
ಸಚಿವ ರಮೇಶ್ ಜಾರಕಿಹೊಳಿ ನೇತೃತ್ವದಲ್ಲಿ ಕೆಲ ಶಾಸಕರು ಮುಂಬೈಗೆ ತೆರಳಲಿದ್ದಾರೆ ಎಂಬ ವರದಿಗಳು ರಾಜಕೀಯ ಷಡ್ಯಂತ್ರ ಎಂದು ದೂರಿದ ಅವರು, ನಾವ್ಯಾರೂ ಮುಂಬೈಗೆ ಹೋಗುತ್ತಿಲ್ಲ. ನಾನಂತೂ ಕಳೆದ 2 ದಿನಗಳಿಂದ ಬೆಂಗಳೂರಿಲ್ಲೇ ಇದ್ದೇನೆ ಎಂದು ಸ್ಪಷ್ಟಪಡಿಸಿದರು.
ತಮ್ಮ ವಿರುದ್ಧ ಡ್ಯಾಮೇಜ್ ಆಗುವ ರೀತಿಯಲ್ಲಿ ಬರುತ್ತಿರುವ ವರದಿಗಳ ಹಿಂದೆ ಪ್ರಭಾವಿ ಸಚಿವರ ಕೈವಾಡವೂ ಇದೆ ಎಂದು ಅವರು ಕಿಡಿಕಾರಿದರು.