ಬೆಂಗಳೂರು: ಚಿನ್ನಸ್ವಾಮಿ ಮೈದಾನದ ಹೊರಗೆ ಆರ್ ಸಿಬಿ ವಿಜಯೋತ್ಸವ ಆಚರಣೆ ವೇಳೆ ನಡೆದಿದ್ದ ಕಾಲ್ತುಳಿತಕ್ಕೆ ಬಿಜೆಪಿ ಗೂಂಡಾಗಳೇ ಕಾರಣ ಎಂದು ಕಾಂಗ್ರೆಸ್ ನಾಯಕ ಎಂ ಲಕ್ಷ್ಮಣ್ ಆರೋಪಿಸಿದ್ದಾರೆ.
ಚಿನ್ನಸ್ವಾಮಿ ಕಾಲ್ತುಳಿತ ಘಟನೆಯಲ್ಲಿ 11 ಮಂದಿ ಸಾವನ್ನಪ್ಪಿದ್ದರು. ಘಟನೆಗೆ ಸಂಬಂಧಿಸಿದಂತೆ ತನಿಖೆ ನಡೆಸಲು ರಾಜ್ಯ ಸರ್ಕಾರ ನ್ಯಾ. ಡಿ ಕುನ್ನಾ ನೇತೃತ್ವದ ಸಮಿತಿಗೆ ಜವಾಬ್ಧಾರಿ ವಹಿಸಿದೆ. ಇಂದು ಡಿ ಕುನ್ನಾ ಅವರನ್ನು ಭೇಟಿ ಮಾಡಿದ ಎಂ ಲಕ್ಷ್ಮಣ್ ನೇತೃತ್ವದ ಕಾಂಗ್ರೆಸ್ ನಾಯಕರ ನಿಯೋಗ ಬಿಜೆಪಿ ವಿರುದ್ಧ ದೂರು ಸಲ್ಲಿಸಿದೆ.
ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಎಂ ಲಕ್ಷ್ಮಣ್, ಚಿನ್ನಸ್ವಾಮಿಯಲ್ಲಿ ನಡೆದ ಕಾಲ್ತುಳಿತ ಘಟನೆಯ ಕೆಲವು ವಿಡಿಯೋಗಳನ್ನು ನಾವು ನೋಡಿದಾಗ ನಮ್ಮ ಗಮನಕ್ಕೆ ಬಂದಿದ್ದೇನೆಂದರೆ ಇದ್ದಕ್ಕಿದ್ದಂತೆ 10 ರಿಂದ 15 ಜನರ ಗುಂಪು ಬೇಕೆಂದೇ ತಳ್ಳಲು ಶುರು ಮಾಡುತ್ತದೆ. ಹಾಗೆ ಇದ್ದಕ್ಕಿದ್ದ ಹಾಗೆ ಅವರು ತಳ್ಳಲು ಕಾರಣವೇನು ಎಂದು ಗೊತ್ತಾಗಬೇಕಿದೆ. ನಮಗೆ ಬಂದ ಮಾಹಿತಿ ಪ್ರಕಾರ ಬಿಜೆಪಿ-ಜೆಡಿಎಸ್ ನ ಗೂಂಡಾಗಳೇ ಈ ರೀತಿ ಸರ್ಕಾರಕ್ಕೆ ಕೆಟ್ಟ ಹೆಸರು ತರಲು ಅಂದು ಗೊಂದಲ ಸೃಷ್ಟಿಸುವ ಕೆಲಸ ಮಾಡಿದ್ದಾರೆ.
ಈ ಬಗ್ಗೆ ನಾವು ಇಂದು ನ್ಯಾ. ಡಿ. ಕುನ್ನಾ ಅವರಿಗೆ ಸಾಕ್ಷಿ ಸಮೇತ ದೂರು ನೀಡಿದ್ದೇವೆ. ಬಿಜೆಪಿಯ ಆರ್ ಅಶೋಕ್, ವಿಜಯೇಂದ್ರ, ಛಲವಾದಿ ನಾರಾಯಣಸ್ವಾಮಿ ಸೇರಿದಂತೆ ಎಲ್ಲಾ ನಾಯಕರು ಈಗ ಫ್ರೀಡಂ ಪಾರ್ಕ್ ನಲ್ಲಿ ಕಾಲ್ತುಳಿತದ ಬಗ್ಗೆ ಪ್ರತಿಭಟನೆ ಮಾಡಲು ಹೊರಟಿರುವುದು ವಿಪರ್ಯಾಸ. ಬಿಜೆಪಿ ನಾಯಕರು ಆವತ್ತು ಟ್ವೀಟ್ ಮಾಡಿ ಪ್ರಚೋದಿಸಿದ್ದಕ್ಕೇ ಗಲಾಟೆಯಾಗಿದೆ. ಸಿಎಂ ಕೂಡಾ ಆವತ್ತು ಟ್ವೀಟ್ ಮಾಡಿದ್ದರು. ಆದರೆ ಸಿಎಂ ಟ್ವೀಟ್ ಮಾಡಿದ ಸಮಯ ಮಧ್ಯಾಹ್ನದ ನಂತರ. ಆದರೆ ಅದಕ್ಕೆ ಮೊದಲೇ ಬಿಜೆಪಿಯವರು ಟ್ವೀಟ್ ಮಾಡಿ ಜನರನ್ನು ಪ್ರಚೋದಿಸಿದ್ದರು. ಇನ್ನು, ಬಿಜೆಪಿ ನಾಯಕ ಆರ್ ಅಶೋಕ್ ಅವರು ನ್ಯಾ. ಡಿ ಕುನ್ನಾ ಬಗ್ಗೆಯೇ ಕೀಳಾಗಿ ಮಾತನಾಡುತ್ತಾರೆ. ಅವರ ಹೆಸರನ್ನು ವ್ಯಂಗ್ಯವಾಗಿ ಕರೆಯುತ್ತಾರೆ. ಇದು ಬಿಜೆಪಿಯವರಿಗೆ ಒಬ್ಬ ಅಲ್ಪಸಂಖ್ಯಾತ ಸಮುದಾಯದ ನ್ಯಾಯಮೂರ್ತಿ ಬಗೆಗಿರುವ ಕೀಳು ಮನಸ್ಥಿತಿ ತೋರಿಸುತ್ತದೆ ಎಂದಿದ್ದಾರೆ.