Publish Date: Sat, 28 Oct 2017 (13:39 IST)
Updated Date: Sat, 28 Oct 2017 (13:55 IST)
ಕಲಬುರ್ಗಿ: ಸಚಿವ ಜಾರ್ಜ್ ಮೇಲೆ ಸಿಬಿಐ ಎಫ್ಐಆರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಜಾರ್ಜ್ ರಾಜೀನಾಮೆ ನೀಡುವ ಅಗತ್ಯವಿಲ್ಲ ಎಂದು ಸಚಿವ ದೇಶಪಾಂಡೆ ಹೇಳಿದ್ದಾರೆ.
ಕಲಬುರ್ಗಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಬಗ್ಗೆ ಸಿಎಂ ಕೈಗೊಂಡ ತೀರ್ಮಾನ ಸರಿಯಾಗಿಯೆ ಇದೆ. ಜಾರ್ಜ್ ವಿರುದ್ಧ ಈಗಾಗಲೇ ಬಿ ರಿಪೋರ್ಟ ಸಲ್ಲಿಸಲಾಗಿದೆ. ಆರೋಪ ಬಂದ ಮಾತ್ರಕ್ಕೆ ರಾಜೀನಾಮೆ ನೀಡಿದ್ರೆ ವಿಧಾನಸೌಧ ಖಾಲಿಯಾಗುತ್ತೆ. ಕೇಂದ್ರದ ಹತ್ತಾರು ಮಂತ್ರಿಗಳ ವಿರುದ್ಧ ಎಫ್ಐಆರ್ ದಾಖಲಾಗಿದೆ. ಹಲವು ಕೇಂದ್ರ ಸಚಿವರು ಕ್ರಿಮಿನಲ್ ಆರೋಪ ಎದುರಿಸುತ್ತಿದ್ದಾರೆ. ಮೊದಲು ಅವರೆಲ್ಲರಿಂದ ರಾಜೀನಾಮೆ ಪಡೆದು ನಂತರ ಬೇಕಾದ್ರೆ ಬಿಜೆಪಿ ಮಾತನಾಡಲಿ. ಗಾಜಿನ ಮನೆಯಲ್ಲಿದ್ದವರು ಬೇರೆಯವರ ಮೇಲೆ ಕಲ್ಲೆಸೆಯುವ ಮುನ್ನ ಯೋಚಿಸಬೇಕು ಎಂದರು.
ಸಂಸದ ಮಲ್ಲಿಕಾರ್ಜುನ ಖರ್ಗೆಗೆ ಸಾಕಷ್ಟು ವರ್ಷದ ಹಿಂದೆಯೇ ಸಿಎಂ ಸ್ಥಾನ ಸಿಗಬೇಕಿತ್ತು. ಅವರು ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದ್ದಾರೆ. ಜತೆಗೆ ಸಾಕಷ್ಟು ಅನುಭವ ಹೊಂದಿದ್ದಾರೆ. ಸಿಎಂ ಆಗಲು ಅವಕಾಶ ಮುಖ್ಯವಲ್ಲ, ಅದೃಷ್ಟವೂ ಬೇಕು. ಸಿದ್ದರಾಮಯ್ಯಗೆ ಅದೃಷ್ಟ ಇತ್ತು ಸಿಎಂ ಆದರು. ಚುನಾವಣೆ ಮುಗಿದ ನಂತರ ಯಾರು ಸಿಎಂ ಆಗ್ತಾರೆ ಎನ್ನುವುದರ ಬಗ್ಗೆ ಚರ್ಚೆ ನಡೆಯಲಿದೆ ಎಂದರು.