Publish Date: Sun, 13 Oct 2024 (16:31 IST)
Updated Date: Sun, 13 Oct 2024 (16:35 IST)
ಬೆಂಗಳೂರು: ಮೈಸೂರು ದಸರಾ ವೇಳೆ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್ ಸೇರಿದಂತೆ ಗಣ್ಯರ ಸಾಲಿನಲ್ಲೇ ರೌಡಿಶೀಟರ್ ಪ್ರಕಾಶ ಮುಧೋಳ ಕೂರಿಸಿರುವ ಬಗ್ಗೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ.
ಬಾಗಲಕೋಟೆ ತಾಲ್ಲೂಕಿನ ಗದ್ದನಕೇರಿ ಬಳಿ ಇರುವ ರಾಮಾರೂಢ ಮಠದ ಸ್ವಾಮೀಜಿ ಅವರನ್ನು ಹೆದರಿಸಿ ₹1 ಕೋಟಿ ಹಣ ವಸೂಲು ಮಾಡಿದ್ದಲ್ಲದೆ ರೌಡಿಶೀಟರ್ ಪ್ರಕಾಶ ಮುಧೋಳ ವಿರುದ್ಧ ಸುನಾರು 11 ಪ್ರಕರಣ ದಾಖಲಾಗಿದೆ. ಇದೀಗ ಗಣ್ಯರ ಸಾಲಿನಲ್ಲಿ ರೌಡಿಶೀಟರ್ಗೆ ಅವಕಾಶ ಮಾಡಿಕೊಟ್ಟಿದ್ದಕ್ಕೆ ಬಿಜೆಪಿ ನಾಯಕರು, ಬಾಗಲಕೋಟೆ ಜನತೆ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಡಿಸಿಎಂ ಡಿಕೆ ಶಿವಕುಮಾರ್, MLC ಯತೀಂದ್ರ ಜೊತೆಗೂ ಪ್ರಕಾಶ್ ಮುಧೋಳ ಸೆಲ್ಫಿ ತೆಗೆದುಕೊಂಡಿದ್ದಾರೆ. ಗಣ್ಯರ ಸಾಲಲ್ಲಿ ಪ್ರಕಾಶ್ ಮುಧೋಳ ಆಸನ ಪಡೆದಿದ್ದೇಗೆ ಎಂಬ ಪ್ರಶ್ನೆ ಹಾಕುತ್ತಿದ್ದಾರೆ.
ಇತ್ತೀಚೆಗಷ್ಟೇ ಬಾಗಲಕೋಟೆ ತಾಲೂಕಿನ ಸೀಮಿಕೇರಿ ರಾಮಾರೂಢ ಮಠದ ಪರಮರಾಮಾರೂಢಶ್ರೀಗೆ ರೌಡಿಶೀಟರ್ ಪ್ರಕಾಶ್ ಮುಧೋಳ ಬೆದರಿಕೆ ಹಾಕಿ 1 ಕೋಟಿ ರೂ. ವಸೂಲಿ ಮಾಡಿದ್ದ. ಎಡಿಜಿಪಿ, ಐಜಿಪಿ ಹೆಸರಲ್ಲಿ ಕರೆ ಮಾಡಿ ವಂಚನೆ ಮಾಡಿದ್ದ. ಈ ಸಂಬಂಧ ಬಾಗಲಕೋಟೆ ಸಿಇಎನ್ ಠಾಣೆ ಪೊಲೀಸರು ಪ್ರಕಾಶ್ನನ್ನು ಬಂಧಿಸಿದ್ದರು. ಸದ್ಯ 4 ದಿನದ ಹಿಂದೆ ಪ್ರಕಾಶ್ ಮುಧೋಳ ಜಾಮೀನಿನ ಮೇಲೆ ಹೊರ ಬಂದಿದ್ದಾನೆ. ಇದೀಗ ದಸರಾ ಕಾರ್ಯಕ್ರಮದಲ್ಲಿ ಗಣ್ಯರ ವೇದಿಕೆಯಲ್ಲಿ ಪ್ರತ್ಯಕ್ಷನಾಗಿದ್ದಾನೆ.