Publish Date: Sun, 13 Oct 2024 (15:55 IST)
Updated Date: Sun, 13 Oct 2024 (15:57 IST)
ಹುಬ್ಬಳ್ಳಿ: ಬಿಜೆಪಿಯವರು ನಿರಾಧಾರವಾದ ವಿಚಾರಗಳ ಬಗ್ಗೆಯೇ ಹೋರಾಟ ಮಾಡುತ್ತಾರೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ಅವರು ಇಂದು ಹುಬ್ಬಳ್ಳಿ ಗಲಭೆ ಪ್ರಕರಣವನ್ನು ಸರ್ಕಾರ ವಾಪಸ್ಸು ಪಡೆದಿರುವ ಬಗ್ಗೆ ಬಿಜೆಪಿಯವರು ಪ್ರತಿಭಟನೆ ನಡೆಸುವ ಬಗ್ಗೆ ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡುತ್ತಾ ಮಾತನಾಡಿದರು.
ಸುಳ್ಳು ಮೊಕದ್ದಮೆಗಳು, ಹೋರಾಟಗಳನ್ನು ಕಾರಣವಾಗಿಸಿ ಮೊಕದ್ದಮೆಗಳಿದ್ದರೆ ಅವುಗಳ ಬಗ್ಗೆ ಸೂಕ್ತವಾಗಿ ತೀರ್ಮಾನಿಸಿ ಪ್ರಕರಣಗಳನ್ನು ವಾವಸ್ಸು ಪಡೆಯಲು ಸಚಿವ ಸಂಪುಟ ಉಪಸಮಿತಿಯನ್ನು ರಚಿಸಲಾಗಿದ್ದು , ಇಂತಹ ಸಮಿತಿಗಳು ಬಿಜೆಪಿ ಸೇರಿದಂತೆ ಎಲ್ಲರ ಅಧಿಕಾರವಧಿಯಲ್ಲಿಯೂ ಅಸ್ತಿತ್ವದಲ್ಲಿತ್ತು.
ಅಂತೆಯೇ ಹುಬ್ಬಳ್ಳಿ ಗಲಭೆ ಪ್ರಕರಣದ ಸುಳ್ಳು ಪ್ರಕರಣವೆಂದು ನಿರ್ಧರಿಸಿ ಪ್ರಕರಣವನ್ನು ವಾಪಸ್ಸು ಪಡೆಯಲಾಗಿದೆ. ಈ ತೀರ್ಮಾನವನ್ನು ನ್ಯಾಯಾಲಯದ ಮುಂದೆ ಮಂಡಿಸಿದ ನಂತರವಷ್ಟೇ ಪ್ರಕರಣವನ್ನು ವಾಪಸ್ಸು ಪಡೆಯಲು ಸಾಧ್ಯ. ಇದೇ ರೀತಿ ಬಿಜೆಪಿಯವರ ವಿರುದ್ಧ ಪ್ರಕರಣಗಳನ್ನೂ ಸಹ ವಾಪಸ್ಸು ಪಡೆಯಲಾಗಿದೆ ಎಂದು ಸ್ಪಷ್ಟಪಡಿಸಿದರು.