Publish Date: Thu, 23 Jan 2025 (11:48 IST)
Updated Date: Thu, 23 Jan 2025 (11:50 IST)
ಬೆಂಗಳೂರು: ಮುಡಾ ಕೇಸ್ ನಲ್ಲಿ ತಮಗೆ ಲೋಕಾಯುಕ್ತ ಕ್ಲೀನ್ ಚಿಟ್ ನೀಡಿದೆ ಎಂದು ವರದಿಯಾಗಿರುವ ಬಗ್ಗೆ ಸಿಎಂ ಸಿದ್ದರಾಮಯ್ಯನವರ ಪ್ರತಿಕ್ರಿಯೆ ಕೇಳಿದಾಗ ಅವರು ಏನೂ ಗೊತ್ತಿಲ್ಲಾರೀ ಎಂದಿದ್ದಾರೆ.
ಮುಡಾದಿಂದ ಸಿಎಂ ಸಿದ್ದರಾಮಯ್ಯ ಪತ್ನಿ ಪಾರ್ವತಿ ಹೆಸರಿನಲ್ಲಿ ತಮ್ಮ ಅಧಿಕಾರ ದುರುಪಯೋಗ ಪಡಿಸಿಕೊಂಡು ಅಕ್ರಮವಾಗಿ ತಮಗೆ ಬೇಕಾದಲ್ಲಿ ಸೈಟು ಪಡೆದುಕೊಂಡಿದ್ದಾರೆ ಎಂದು ಆರೋಪವಾಗಿದೆ. ಈ ಕೇಸ್ ರಾಜ್ಯ ರಾಜಕಾರಣದಲ್ಲಿ ಭಾರೀ ಸಂಚಲನ ಮೂಡಿಸಿತ್ತು. ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ದೂರು ನೀಡಿದ್ದರು.
ಅದರಂತೆ ಪ್ರಕರಣದ ವಿಚಾರಣೆಯನ್ನು ಲೋಕಾಯುಕ್ತ ಪೊಲೀಸರು ನಡೆಸಿದ್ದರು. ಸಿಎಂ ಮತ್ತು ಪತ್ನಿ ಪಾರ್ವತಿ ಇಬ್ಬರೂ ಒಮ್ಮೆ ಲೋಕಾಯುಕ್ತ ಕಚೇರಿಗೆ ಬಂದು ವಿಚಾರಣೆಗೆ ಹಾಜರಾಗಿದ್ದರು. ಜೊತೆಗೆ ಲೋಕಾಯುಕ್ತ ಅಧಿಕಾರಿಗಳೂ ಮುಡಾ ಮಾಜಿ ಆಯುಕ್ತರು, ಅಧಿಕಾರಿಗಳ ತನಿಖೆ ನಡೆಸಿದ್ದಾರೆ.
ಇದೀಗ ತನಿಖೆ ಪೂರ್ಣಗೊಳಿಸಿ ವರದಿ ತಯಾರಿಸಲಾಗಿದ್ದು ಈ ವರದಿಯಲ್ಲಿ ಸಿಎಂ ಮತ್ತು ಪತ್ನಿ ವಿರುದ್ಧದ ಹೇಳಿಕೆಗೆ ಯಾವುದೇ ಪುರಾವೆಯಿಲ್ಲ. ಅಧಿಕಾರಿಗಳಿಂದ ತಪ್ಪಾಗಿತ್ತು ಎಂದು ವರದಿ ನೀಡಲಾಗಿದೆ ಎನ್ನಲಾಗಿದೆ. ಇದನ್ನು ಇನ್ನೂ ಕೋರ್ಟ್ ಗೆ ಸಲ್ಲಿಕೆ ಮಾಡಿಲ್ಲ.
ಈ ಹಿನ್ನಲೆಯಲ್ಲಿ ಸಿಎಂ ಸಿದ್ದರಾಮಯ್ಯನವರನ್ನು ಇಂದು ಮಾಧ್ಯಮಗಳು ಪ್ರಶ್ನೆ ಮಾಡಿವೆ. ಈ ವೇಳೆ ಪ್ರತಿಕ್ರಿಯಿಸಿದ ಅವರು ಏನೂ ಗೊತ್ತಿಲ್ಲಾರೀ.. ಏನೂ ಗೊತ್ತಿಲ್ಲ ಎಂದು ತಮ್ಮದೇ ಶೈಲಿಯಲ್ಲಿ ಉತ್ತರಿಸಿದ್ದಾರೆ.