Publish Date: Sat, 18 Jan 2025 (18:13 IST)
Updated Date: Sat, 18 Jan 2025 (18:16 IST)
ಮೈಸೂರು: ಮುಡಾ ನಿವೇಶನ ಹಂಚಿಕೆ ಪ್ರಕರಣದಲ್ಲಿ ತನಿಖೆ ನಡೆಸುತ್ತಿರುವ ಜಾರಿ ನಿರ್ದೇಶನಾಲಯವು ₹300 ಕೋಟಿ ಮೌಲ್ಯದ ಸ್ಥಿರಾಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿರುವುದರಿಂದ ಪ್ರಾಧಿಕಾರದಲ್ಲಿ ತಪ್ಪುಗಳಾಗಿದೆ ಎಂದರ್ಥ. ಹಾಗಾಗಿ ನೈತಿಕ ಹೊಣೆ ಹೊತ್ತು ಸಿದ್ದರಾಮಯ್ಯ ಅವರು ತಮ್ಮ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಒತ್ತಾಯಿಸಿದರು.
ಇಲ್ಲಿ ಪತ್ರಕರ್ತರೊಂದಿಗೆ ಶನಿವಾರ ಮಾತನಾಡಿದ ಅವರು, ಈ ಪ್ರಕರಣ ಬೆಳಕಿಗೆ ಬಂದ ಕೂಡಲೇ ನಾವು ಸಿಎಂ ಅವರ ಬಳಿ ರಾಜೀನಾಮೆ ನೀಡುವಂತೆ ಕೇಳಿಕೊಂಡೆವು. ಅವರು ತನಿಖೆಯಾಗಲಿ ಎನ್ನುತ್ತಿದ್ದರು. ಈಗ ಇ.ಡಿಯೇ ತನಿಖೆ ಮಾಡಿ ಅಕ್ರಮವಾಗಿದೆ ಎಂದು ವರದಿ ಬಿಡುಗಡೆ ಮಾಡಿದೆ.
ಈಗಲಾದರೂ ಸಿದ್ದರಾಮಯ್ಯ ಅವರು ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿ ನಿಷ್ಪಕ್ಷಪಾತ ತನಿಖೆಗೆ ಅನುಕೂಲ ಮಾಡಿಕೊಡಬೇಕು. ತನಿಖೆ ಮುಗಿದ ಮೇಲೆ ತಮ್ಮ ಪಾತ್ರ ಇಲ್ಲದಿದ್ದರೆ ಅಧಿಕಾರ ಪಡೆದುಕೊಳ್ಳಲಿ ಎಂದರು.
ಮುಂದಿನ ದಿನಗಳಲ್ಲಿ ಸಿಎಂ ರಾಜೀನಾಮೆಗೆ ಒತ್ತಾಯಿಸಿ ಮತ್ತೇ ಹೋರಾಟ ನಡೆಸುತ್ತೇವೆ. ಇದು ಮುಡಾ ಶುಚಿಗೊಳಿಸುವ ಮೊದಲ ಹೆಜ್ಜೆಯಾಗಿದೆ. ಸಂಪೂರ್ಣವಾಗಿ ಸ್ವಚ್ಛಗೊಳ್ಳಲು ಇನ್ನೊಂದೆರಡು ವರ್ಷ ಬೇಕಾಗುತ್ತದೆ ಎಂದರು.