Publish Date: Sat, 07 Jun 2025 (18:09 IST)
Updated Date: Sat, 07 Jun 2025 (18:11 IST)
ಬೆಂಗಳೂರು: ಇಂದು ಮುಸ್ಲಿಮರ ಪವಿತ್ರ ಬಕ್ರೀದ್ ಹಬ್ಬವಾಗಿದ್ದು, ಈ ಬಾರಿ ಸಿಎಂ ಸಿದ್ದರಾಮಯ್ಯ ಬಕ್ರೀದ್ ಆಚರಣೆಯಿಂದ ದೂರವುಳಿದಿದ್ದಾರೆ. ಇದಕ್ಕೆ ಚಿನ್ನಸ್ವಾಮಿ ಪ್ರಕರಣದಿಂದ ಉಂಟಾಗಿರುವ ಮುಜುಗರವೇ ಕಾರಣ ಎನ್ನಲಾಗುತ್ತಿದೆ.
ಸಾಮಾನ್ಯವಾಗಿ ಸಿಎಂ ಸಿದ್ದರಾಮಯ್ಯ ಈದ್, ಬಕ್ರೀದ್ ಹಬ್ಬಗಳ ಸಂದರ್ಭದಲ್ಲಿ ಮುಸ್ಲಿಂ ಬಾಂಧವರೊಂದಿಗೆ ಪ್ರಾರ್ಥನೆಯಲ್ಲಿ ಪಾಲ್ಗೊಳ್ಳುತ್ತಾರೆ. ಸಚಿವ ಜಮೀರ್ ಅಹ್ಮದ್ ಜೊತೆಗೆ ಪ್ರಾರ್ಥನೆಯಲ್ಲಿ ಭಾಗಿಯಾಗುತ್ತಾರೆ. ಆದರೆ ಈ ಬಾರಿ ದೂರವೇ ಉಳಿದಿದ್ದಾರೆ.
ಇದಕ್ಕೆ ಚಿನ್ನಸ್ವಾಮಿ ಪ್ರಕರಣದಿಂದ ಸರ್ಕಾರಕ್ಕಾಗಿರುವ ಮುಜುಗರವೇ ಕಾರಣ ಎನ್ನಲಾಗುತ್ತಿದೆ. ಚಿನ್ನಸ್ವಾಮಿ ದುರಂತಕ್ಕೆ ಪೊಲೀಸರನ್ನು ಹೊಣೆಗಾರರನ್ನಾಗಿ ಮಾಡಿ ಸರ್ಕಾರ ಕಮಿಷನರ್ ದಯಾನಂದ್ ಸೇರಿದಂತೆ ಪ್ರಮುಖರನ್ನು ಅಮಾನತು ಮಾಡಿದೆ. ಆದರೆ ಇದು ಸರ್ಕಾರಕ್ಕೇ ಮುಳುವಾಗಿದೆ.
ಸರ್ಕಾರದ ಕಡೆಯಿಂದಲೇ ಪೊಲೀಸರಿಗೆ ಒತ್ತಡ ಬಂದಿದ್ದರಿಂದಲೇ ಕಾರ್ಯಕ್ರಮ ಮಾಡಲಾಗಿತ್ತು ಎನ್ನಲಾಗಿತ್ತು. ಈ ಎಲ್ಲಾ ಬೆಳವಣಿಗೆಯಿಂದ ಸರ್ಕಾರಕ್ಕೆ ಒಂದು ರೀತಿಯಲ್ಲಿ ಮುಜುಗರವಾಗಿದೆ. ಹಾಗಾಗಿಯೇ ಸಿಎಂ ಬೇರೆ ಎಲ್ಲಾ ಕಾರ್ಯಕ್ರಮಗಳಿಂದ ದೂರವುಳಿದಿದ್ದಾರೆ.
ಈ ಬಾರಿ ರಂಜಾನ್ ಪ್ರಾರ್ಥನೆಯಲ್ಲೂ ಸಿಎಂ ಸಿದ್ದರಾಮಯ್ಯ ಭಾಗಿಯಾಗಿರಲಿಲ್ಲ. ಆದರೆ ಆಗ ಅವರಿಗೆ ಮಂಡಿ ನೋವಿನ ಸಮಸ್ಯೆ ಹೆಚ್ಚಾಗಿತ್ತು. ಹೀಗಾಗಿಯೇ ಭಾಗಿಯಾಗಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಸ್ಪಷ್ಟನೆ ಕೊಟ್ಟಿದ್ದರು.