Publish Date: Mon, 22 Nov 2021 (18:18 IST)
Updated Date: Mon, 22 Nov 2021 (18:21 IST)
ಕನಕದಾಸರ ತ್ರಿಪದಿಗಳು, ಸಾಹಿತ್ಯ, ತತ್ವಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳಲು ಸಂಕಲ್ಪ ಮಾಡುವ ದಿನವಿದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ಅವರು ಇಂದು ಶಾಸಕರ ಭವನದ ಆವರಣದ ಬಳಿ ಇರುವ ಸಂತ ಕವಿ ಶ್ರೀಕನಕದಾಸರ ಪುತ್ಥಳಿಯ ಬಳಿ ಕನಕದಾಸ ಜಯಂತಿಯ ಅಂಗವಾಗಿ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿ, ನಂತರ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದರು.ದಾಸರಲ್ಲಿ ಅತ್ಯಂತ ಶ್ರೇಷ್ಠ ದಾಸರು ಕನಕದಾಸರು. ಕನ್ನಡ ನಾಡು ಕಂಡ ದಾಸ ಸಾಹಿತ್ಯಕ್ಕೆ ಬಹಳ ದೊಡ್ಡ ಕೊಡುಗೆ ನೀಡಿದ ತತ್ತ್ವಜ್ಞಾನಿ ಹಾಗೂ ಸಮಾಜ ಸುಧಾರಕರು. ವಿಶ್ವ ಮಾನವ ಕಲ್ಪನೆ ಹೊಂದಿದ್ದ ಮಾನವೀಯ ಗುಣಗಳನ್ನು ಪ್ರತಿಪಾದಿಸಿ, ಸಮಾನತೆ ಸಾರಿದರು ಎಂದು ತಿಳಿಸಿದರು.
ಶಿಗ್ಗಾವಿಯಲ್ಲಿ ಹುಟ್ಟಿ ಕರ್ಮಭೂಮಿ ಕಾಗಿನೆಲೆ. ದಾಸ ಪದ ಹಾಡಿ ಜೀವನದ ಸಾರವನ್ನು ತಿಳಿಸಿದರು. 'ಕುಲ ಕುಲ ಕುಲವೆಂದು ಬಡಿದಾಡದಿರಿ ನಿಮ್ಮ ಕುಲದ ನೆಲೆಯನೇನಾದರೂ ಬಲ್ಲಿರಾ' ಎಂದು ಮಾರ್ಮಿಕವಾಗಿ ತಿಳಿಸಿದ ಕನಕದಾಸರು ರಚಿಸಿರುವ ರಾಮಧಾನ್ಯಚರಿತಾ ಸೇರಿದಂತೆ ಹಲವಾರು ಸಾಹಿತ್ಯಗಳು ನಮಗೆ ದಾರಿದೀಪ. ಅವರ ತತ್ತ್ವ ಆದರ್ಶಗಳು ಇಂದಿಗೂ ಪ್ರಸ್ತುತ. ಅವುಗಳ ಮೂಲಕ ಸಮಾಜದಲ್ಲಿ ಶಾಂತಿ ಸಮಾನತೆ, ಪ್ರಗತಿ ಸಾಧಿಸಲು ಸಾಧ್ಯವಿದೆ. ಪರಿವರ್ತನೆಯ ಹರಿಕಾರರು, ತಮ್ಮ ರಾಜಸತ್ವವನ್ನು ಬಿಟ್ಟು, ಅವರು ದಾಸಶ್ರೇಷ್ಠರಾಗಿದ್ದಾರೆ ಎಂದು ತಿಳಿಸಿದರು.