ತಾನೇ ಪಿಸ್ತೂಲ್ನಿಂದ ಶೂಟ್ ಮಾಡಿಕೊಂಡು ಆತ್ಮಹತ್ಯೆಗೆ ಶರಣಾದ ಕಾನ್ಫಿಡೆಂಟ್ ಗ್ರೂಪ್ ಅಧ್ಯಕ್ಷ ಡಾ. ಸಿ.ಜೆ. ರಾಯ್ ಅವರು ಸಾವಿಗೂ ಮುನ್ನಾ ತನ್ನ ತಾಯಿಯ ಜತೆ ಮಾತನಾಡಲು ಬಯಸಿದ್ದರು ಎಂದು ತಿಳಿದುಬಂದಿದೆ.
ಆದಾಯ ತೆರಿಗೆ (ಐಟಿ) ಅಧಿಕಾರಿಗಳು ತಮ್ಮ ಕಂಪನಿಗಳ ಮೇಲೆ ತನಿಖೆ ನಡೆಸುತ್ತಿರುವಾಗಲೇ ರಾಯ್ ಅವರು ಅದೇ ಕಚೇರಿಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ಇನ್ನೂ ಸಾವಿಗೂ ಮುನ್ನಾ ರಾಯ್ ತಮ್ಮ ತಾಯಿಯೊಂದಿಗೆ ಮಾತನಾಡಲು ಬಯಸಿರುವುದಾಗಿ ಸಹೋದ್ಯೋಗಿಗಳಿಗೆ ತಿಳಿಸಿದ್ದರು ಎಂಬ ಅಂಶ ಇದೀಗ ತಿಳಿದುಬಂದಿದೆ.
ಡಿಸೆಂಬರ್ ಮೊದಲ ವಾರದಲ್ಲಿ ಸಿಜೆ ರಾಯ್ಗೆ ಸಂಬಂಧಿಸಿದ ಕಂಪನಿಗಳ ಮೇಲೆ ಮೊದಲು ಆದಾಯ ತೆರಿಗೆ ದಾಳಿ ನಡೆಸಲಾಯಿತು. ಕಳೆದ ಕೆಲವು ದಿನಗಳಿಂದ, ಐಟಿ ಅಧಿಕಾರಿಗಳು ವಶಪಡಿಸಿಕೊಂಡ ದಾಖಲೆಗಳ ಬಗ್ಗೆ ಅವರನ್ನು ಪ್ರಶ್ನಿಸುತ್ತಿದ್ದರು ಮತ್ತು ಸ್ಪಷ್ಟೀಕರಣಗಳನ್ನು ಕೇಳುತ್ತಿದ್ದರು.
ರಾಯ್ ಈಗಾಗಲೇ ಕೇರಳದಲ್ಲಿ ವಿಚಾರಣೆಗೆ ಹಾಜರಾಗಿದ್ದರು. ದುಬೈನಿಂದ ಹಿಂದಿರುಗಿದ ನಂತರ, ಅಗತ್ಯವಿದ್ದಾಗ ಬೆಂಗಳೂರಿನಲ್ಲಿ ಲಭ್ಯವಿರುತ್ತಾರೆ ಎಂದು ಅವರು ಅಧಿಕಾರಿಗಳಿಗೆ ಮಾಹಿತಿ ನೀಡಿದರು. ನಂತರ ಐಟಿ ತಂಡವು ನಗರದಲ್ಲಿ ಅವರನ್ನು ವಿಚಾರಣೆ ಮಾಡಲು ಪ್ರಾರಂಭಿಸಿತು.
ಐಟಿ ದಾಳಿ ಅಂತಿಮ ಘಟ್ಟಕ್ಕೆ ತಲುಪುತ್ತಿದ್ದಂತ್ತೆ ಸಿಜೆ ರಾಯ್ ಅವರು ಆತ್ಮಹತ್ಯೆಗೆ ಶರಣಾಗಿರುವುದು ಭಾರೀ ಕುತೂಹಲವನ್ನು ಮೂಡಿಸಿದೆ.