Publish Date: Mon, 28 Oct 2024 (10:02 IST)
Updated Date: Mon, 28 Oct 2024 (10:04 IST)
ಚನ್ನಪಟ್ಟಣ: ಮುಂಬರುವ ಚನ್ನಪಟ್ಟಣ ಉಪಚುನಾವಣೆಯಲ್ಲಿ ತಾವೇ ಆರಿಸಿದ ಸಿಪಿ ಯೋಗೇಶ್ವರ್ ರನ್ನು ಗೆಲ್ಲಿಸುವ ಸವಾಲು ಡಿಸಿಎಂ ಡಿಕೆ ಶಿವಕುಮಾರ್ ಅವರದ್ದು. ಇದೀಗ ಯೋಗೇಶ್ವರ್ ಗೆಲುವಿನಿಂದ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆಯಾಗಬಹುದು ಎಂಬ ಮಾತು ಕೇಳಿಬರುತ್ತಿದೆ.
ಚನ್ನಪಟ್ಟಣದಲ್ಲಿ ಬಿಜೆಪಿ ಟಿಕೆಟ್ ಸಿಗದೇ ಬಂಡಾಯವೆದ್ದಿದ್ದ ಸಿಪಿ ಯೋಗೇಶ್ವರ್ ಅವರನ್ನು ಕಾಂಗ್ರೆಸ್ ಗೆ ಕರೆತರುವಲ್ಲಿ ಡಿಕೆ ಬ್ರದರ್ಸ್ ಪಾತ್ರ ಮುಖ್ಯವಾದುದು. ಜೊತೆಗೆ ಚನ್ನಪಟ್ಟಣ ಡಿಕೆಶಿಗೆ ತವರಿದ್ದಂತೆ. ಹೀಗಾಗಿ ಇಲ್ಲಿ ತಮ್ಮ ಅಭ್ಯರ್ಥಿಯನ್ನು ಗೆಲ್ಲಿಸುವುದು ಡಿಕೆಶಿಗೆ ಪ್ರತಿಷ್ಠೆಯ ವಿಚಾರ.
ಒಂದು ವೇಳೆ ಈ ಚುನಾವಣೆಯಲ್ಲಿ ಸಿಪಿ ಯೋಗೇಶ್ವರ್ ಗೆದ್ದರೆ ಡಿಕೆ ಶಿವಕುಮಾರ್ ಗೆ ಬಂಪರ್ ಲಾಟರಿ ಕುದುರಲಿದೆ. ಯೋಗೇಶ್ವರ್ ಒಕ್ಕಲಿಗ ನಾಯಕ. ಅವರನ್ನು ಗೆಲ್ಲಿಸಿದರೆ ಡಿಕೆ ಶಿವಕುಮಾರ್ ಮುಂದೆ ಮುಖ್ಯಮಂತ್ರಿ ಆಗಲಿದ್ದಾರೆ ಎಂದು ಕಾಂಗ್ರೆಸ್ ವಲಯದಲ್ಲಿ ಚರ್ಚೆ ಜೋರಾಗಿದೆ.
ಕೆಲವು ದಿನಗಳಿಂದ ಮುಖ್ಯಮಂತ್ರಿ ಬದಲಾವಣೆ ವಿಚಾರ ತಣ್ಣಗಾಗಿತ್ತು. ಆದರೆ ಈಗ ಚನ್ನಪಟ್ಟಣದ ಗೆಲುವು ಮತ್ತೆ ರಾಜ್ಯದಲ್ಲಿ ಮುಖ್ಯಮಂತ್ರಿ ಬದಲಾವಣೆ ಚರ್ಚೆಯ ಕಿಡಿ ಜೋರಾಗಿಸಲಿದೆ. ಹೀಗಾಗಿ ಈ ಚುನಾವಣೆ ಕೇವಲ ಯೋಗೇಶ್ವರ್ ಗೆ ಮಾತ್ರವಲ್ಲ, ಡಿಕೆ ಶಿವಕುಮಾರ್ ಗೂ ಮುಖ್ಯವಾಗಿದೆ.