Publish Date: Mon, 12 Aug 2024 (08:50 IST)
Updated Date: Mon, 12 Aug 2024 (08:56 IST)
ಮೈಸೂರು: ಸಿಎಂ ಸಿದ್ದರಾಮಯ್ಯ ಇದೀಗ ಮುಡಾ ಹಗರಣದ ಉರುಳಿನಲ್ಲಿ ಒದ್ದಾಡುತ್ತಿದ್ದಾರೆ. ಸಿದ್ದರಾಮಯ್ಯಗೆ ಮುಡಾ ಕಂಟಕ ಎದುರಾಗಲು ಚಾಮುಂಡಿ ತಾಯಿಯ ಶಾಪವೇ ಕಾರಣವಾಯಿತೇ ಎಂಬ ಗುಸು ಗುಸು ಶುರುವಾಗಿದೆ.
ಇದೇ ವರ್ಷ ಮಾರ್ಚ್ ನಲ್ಲಿ ಸಿದ್ದು ಸರ್ಕಾರ ಚಾಮುಂಡಿ ಬೆಟ್ಟದ ಸಂಪೂರ್ಣ ಹೊಣೆಯನ್ನು ರಾಜಮನೆತನದಿಂದ ಸರ್ಕಾರದ ನಿಯಂತ್ರಣಕ್ಕೆ ತರುವಂತಹ ಚಾಮುಂಡೇಶ್ವರಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರ ಅಧಿನಿಯಮದ ಹೊಸ ಕಾಯ್ದೆ ಜಾರಿಗೆ ತರಲಾಗಿತ್ತು. ಅದರಂತೆ ಚಾಮುಂಡಿ ಬೆಟ್ಟದಲ್ಲಿ ನಡೆಯುವ ಎಲ್ಲಾ ಕಾರ್ಯಕ್ರಗಳು, ಅಭಿವೃದ್ಧಿ ಕಾರ್ಯಗಳಲ್ಲಿ ರಾಜಮನೆತನದ ಮಧ್ಯಸ್ಥಿಕೆಯಿಲ್ಲದೇ ನೇರವಾಗಿ ಸರ್ಕಾರವೇ ನಿಯಂತ್ರಿಸುವಂತಹ ಕಾಯಿದೆ ಇದಾಗಿತ್ತು.
ಮೈಸೂರು ಚಾಮುಂಡಿ ಸನ್ನಿಧಿ ಮತ್ತು ರಾಜಮನೆನತಕ್ಕಿರುವ ನಂಟು ಇಂದು ನಿನ್ನೆಯದಲ್ಲ. ಈಗಲೂ ರಾಜಮನೆತನವೆಂದರೆ ಮೈಸೂರು ಜನರಲ್ಲಿ ಒಂದು ರೀತಿ ಗೌರವವಿದೆ. ಆದರೆ ಸಿದ್ದು ಸರ್ಕಾರ ಹಳೆಯ ಪದ್ಧತಿಗೆ ತಿಲಾಂಜಲಿ ಇಟ್ಟು ಚಾಮುಂಡಿ ತಾಯಿಯ ಸನ್ನಿಧಿಯ ಸಂಪೂರ್ಣ ನಿಯಂತ್ರಣವನ್ನು ತನ್ನ ವಶಕ್ಕೆ ಪಡೆಯಲು ಕಾನೂನು ರೂಪಿಸಿದ್ದೇ ಅವರಿಗೆ ಮುಳುವಾಯಿತೇ ಎಂಬ ಅನುಮಾನ ಶುರುವಾಗಿದೆ. ಚಾಮುಂಡೇಶ್ವರಿ ತಾಯಿಯ ಆಸ್ತಿಗೆ ಕೈ ಹಾಕಿದ್ದಕ್ಕೇ ಸಿದ್ದರಾಮಯ್ಯಗೆ ಈ ಗತಿ ಬಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ.
ಶತಮಾನಗಳಿಂದಲೂ ನಡೆದುಕೊಂಡು ಬಂದ ಸಂಪ್ರದಾಯಕ್ಕೆ ತಿಲಾಂಜಲಿ ಇಟ್ಟು ಚಾಮುಂಡಿ ಬೆಟ್ಟದಲ್ಲಿ ಸರ್ಕಾರದ ನಿಯಂತ್ರಣಕ್ಕೆ ಕೈ ಹಾಕಿದ್ದಕ್ಕೆ ಚಾಮುಂಡಿ ತಾಯಿಯೇ ಸಿದ್ದರಾಮಯ್ಯ ಮುಡಾ ಹಗರಣದ ಕಂಟಕ ತಂದೊಡ್ಡಿರಬಹುದು ಎಂದು ಸಾರ್ವಜನಿಕರು ಮಾತನಾಡಿಕೊಳ್ಳುತ್ತಿದ್ದಾರೆ.