Publish Date: Tue, 21 Aug 2018 (17:00 IST)
Updated Date: Tue, 21 Aug 2018 (17:05 IST)
ಎಡದಂಡೆಯ ಮೊದಲ ವಿತರಣಾ ಕಾಲುವೆ ಒಡೆದ ಪರಿಣಾಮ ರೈತರ ಜಮೀನುಗಳಿಗೆ ನೀರು ನುಗ್ಗಿದೆ. ಹೀಗಾಗಿ ಕಷ್ಟಪಟ್ಟ ಬೆಳೆದ ಬೆಳೆ ನೀರು ಪಾಲಾಗಿರುವುದರಿಂದ ರೈತರು ಸಂಕಷ್ಟಕ್ಕೆ ಒಳಗಾಗಿದ್ದಾರೆ.
ವಿಜಯಪುರ ಜಿಲ್ಲೆಯ ಆಲಮಟ್ಟಿ ಸಮೀಪದ ಯಲಗೂರ ಗ್ರಾಮದ ಬಳಿ ಆಲಮಟ್ಟಿ ಎಡದಂಡೆ ಮೊದಲ ವಿತರಣಾ ಕಾಲುವೆ ಒಡೆದಿದೆ. ಇದರಿಂದಾಗಿ ಕಾಲುವೆ ಅಕ್ಕ ಪಕ್ಕದ 30 ಕ್ಕೂ ಅಧಿಕ ಎಕರೆ ಜಮೀನಿಗೆ ನೀರು ನುಗ್ಗಿದೆ. ನೀರು ಜಮೀನಿಗೆ ನುಗ್ಗಿದರೂ ತಕ್ಷಣಕ್ಕೆ ಕೆಬಿಜೆಎನ್ ಎಲ್ ಅಧಿಕಾರಿಗಳು ಭೇಟಿ ನೀಡಿಲ್ಲ. ಹೀಗಾಗಿ ಜಮೀನಿನಲ್ಲಿ ಬೆಳೆದ ಕಬ್ಬು, ಮೆಕ್ಕೆಜೋಳ, ತೊಗರಿ ಜಲಾವೃತವಾಗಿವೆ. ತಕ್ಷಣಕ್ಕೆ ಸ್ಪಂದಿಸದ ಸೆಕ್ಷನ್ ಆಫೀಸರ್ ಆರ್.ಕೆ. ಜೋಗನ್ನವರ ಅವರನ್ನು ರೈತರು ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
ವಿಜಯಪುರ ಜಿಲ್ಲೆ ನಿಡಗುಂದಿ ತಾಲ್ಲೂಕಿನ ಯಲಗೂರು ಗ್ರಾಮದ ಯಲ್ಲವ್ವ ದಾಸರ, ಕನಕಪ್ಪ ದಾಸರ, ರಂಗಪ್ಪ ದಾಸರ, ಅಶೋಕ ತಳವಾರ, ಕಲ್ಲಪ್ಪ ವಾಲೀಕರ, ಪರಶುರಾಮ ತಳವಾರ, ನಿಂಗಪ್ಪ ಡೆಂಗಿ, ಗುಂಡಪ್ಪ ತಳವಾರ ಅವರ ಜಮೀನಿಗೆ ನೀರು ನುಗ್ಗಿದ್ದು, ಬೆಳೆ ಹಾನಿಗೊಳಗಾಗಿದೆ.