Publish Date: Mon, 29 Dec 2025 (17:27 IST)
Updated Date: Mon, 29 Dec 2025 (17:34 IST)
ಬೆಂಗಳೂರು: ರಾಜ್ಯದಲ್ಲಿ ಅತ್ಯಂತ ಪ್ರಾಮಾಣಿಕ ಸಿಎಂ ಎಂದು ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು ಎಂದು ಸಚಿವ ಬೈರತಿ ಸುರೇಶ್ ಹಾಡಿ ಹೊಗಳಿದ್ದಾರೆ.
ಇಂದು ಕಾರ್ಯಕ್ರಮವೊಂದರಲ್ಲಿ ಭಾಗಿಯಾಗಿ ಭಾಷಣ ಮಾಡಿದ ಅವರು ಸಿಎಂ ಸಿದ್ದರಾಮಯ್ಯನವರನ್ನು ಹಾಡಿ ಹೊಗಳಿದ್ದಾರೆ. ಸಿದ್ದರಾಮಯ್ಯ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿರುವ ಬೈರತಿ ಸುರೇಶ್ ಈ ವೇಳೆ ವಿರೋಧಿಗಳಿಗೂ ಟಾಂಗ್ ಕೊಟ್ಟಿದ್ದಾರೆ.
16 ಬಜೆಟ್, ಎರಡು ಬಾರಿ ಮುಖ್ಯಮಂತ್ರಿ ಆದವರು ಸಿದ್ದರಾಮಯ್ಯನವರು. ದೇಶದಲ್ಲಿ ಅತ್ಯಂತ ಪ್ರಾಮಾಣಿಕ ಮುಖ್ಯಮಂತ್ರಿ ಅಂತ ಯಾರಾದರೂ ಇದ್ದರೆ ಅದು ಸಿದ್ದರಾಮಯ್ಯನವರು ಮಾತ್ರ ಎಂದು ಹೊಗಳಿದ್ದಾರೆ.
ಅವರು ಇಷ್ಟು ಸಾಧನೆ ಮಾಡಿರುವುದಕ್ಕೇ ಹಲವರಿಗೆ ಹೊಟ್ಟೆ ಕಿಚ್ಚು. ಹೊಟ್ಟೆ ಕಿಚ್ಚಿಗೆ ಕಣ್ಣೀರು ಹಾಕುತ್ತಿದ್ದಾರೆ. ಹೊಟ್ಟೆ ಕಿಚ್ಚು ಪಡವವರು ನಮ್ಮವರೇ ಎಂದು ತಿಳಿದುಕೊಳ್ಳಬೇಕಾಗುತ್ತದೆ. ಅಂತಹವರನ್ನು ಕ್ಷಮಿಸಬೇಕಾಗುತ್ತದೆ ಎಂದು ವಿರೋಧಿಗಳಿಗೆ ಟಾಂಗ್ ಕೊಟ್ಟಿದ್ದಾರೆ.
ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರವಾಗಿ ಸಿದ್ದು-ಡಿಕೆಶಿ ಬಣದ ನಡುವೆ ಒಳಗೊಳಗೇ ತಿಕ್ಕಾಟ ನಡೆಯುತ್ತಿರುವಾಗ ಬೈರತಿ ಸುರೇಶ್ ಈ ರೀತಿ ಸಿಎಂ ಗುಣಗಾನ ಮಾಡಿದ್ದಾರೆ. ಪರೋಕ್ಷವಾಗಿ ಡಿಕೆಶಿ ಬಣಕ್ಕೇ ಟಾಂಗ್ ಕೊಟ್ಟರೇನೋ ಎಂಬಂತಿತ್ತು ಅವರ ಹೇಳಿಕೆ.