Select Your Language

Notifications

webdunia
webdunia
webdunia
webdunia

ರಾಹುಲ್ ಗಾಂಧಿಯ ಚುನಾವಣಾ ಅಕ್ರಮ ಪ್ರತಿಭಟನೆ ಕಪಟ ನಾಟಕ: ಬಿವೈ ವಿಜಯೇಂದ್ರ

BY Vijayendra

Krishnaveni K

ಬೆಂಗಳೂರು , ಬುಧವಾರ, 30 ಜುಲೈ 2025 (16:19 IST)
ಬೆಂಗಳೂರು: ಕೇಂದ್ರದಲ್ಲಿ ಅಧಿಕಾರಕ್ಕೆ ಬರಲಾಗದೆ ಸೋಲಿನ ಹತಾಶೆಯಲ್ಲಿರುವ ಕಾಂಗ್ರೆಸ್ ಪಕ್ಷವು ಚುನಾವಣಾ ಅಕ್ರಮದ ಹೊಸ ಕಪಟ ನಾಟಕ ಮಾಡುತ್ತಿದೆ. ರಾಹುಲ್ ಗಾಂಧಿಯವರು ಕರ್ನಾಟಕದಲ್ಲಿ ಈ ಕಪಟ ನಾಟಕ ಮಾಡಲು ಮುಂದಾದಂತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಟೀಕಿಸಿದ್ದಾರೆ. 

ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಇಂದು ಮಾಧ್ಯಮಗಳ ಜೊತೆ  ಮಾತನಾಡಿದ ಅವರು, ರಾಹುಲ್ ಗಾಂಧಿಯವರು ಆಗಸ್ಟ್ 4 ಅಥವಾ 5ರಂದು ಬೆಂಗಳೂರಿಗೆ ಬಂದು ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಪ್ರತಿಭಟನೆ; ಪಾದಯಾತ್ರೆ ಅಥವಾ ಧರಣಿ ಮಾಡುತ್ತಾರೆ ಎನ್ನಲಾಗುತ್ತಿದೆ. ಕಾಂಗ್ರೆಸ್ ಮತ್ತು ರಾಹುಲ್ ಗಾಂಧಿಯವರ ನಡವಳಿಕೆ ಗಮನಿಸಿದರೆ ಅಯ್ಯೋ ಪಾಪ ಅನಿಸುತ್ತದೆ ಎಂದು ಟೀಕಿಸಿದರು.

ಚುನಾವಣಾ ಆಯೋಗದ ಬಗ್ಗೆಯೂ ಅನುಮಾನ, ಸುಪ್ರೀಂ ಕೋರ್ಟಿನ ಬಗ್ಗೆಯೂ ಅನುಮಾನ ವ್ಯಕ್ತಪಡಿಸುತ್ತಾರೆ. ರಾಹುಲ್ ಗಾಂಧಿ, ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ಅವರ ಬಳಿ ಪುರಾವೆ ಇದ್ದರೆ ಅದನ್ನು ನ್ಯಾಯಾಲಯಕ್ಕೆ ಸಲ್ಲಿಸಲಿ ಎಂದು ಸವಾಲು ಹಾಕಿದರು. ನೀವು ಅದನ್ನು ಸುಪ್ರೀಂ ಕೋರ್ಟಿನಲ್ಲಿ ಪ್ರಶ್ನೆ ಮಾಡಿ ಎಂದು ಆಗ್ರಹಿಸಿದರು.

ಹೇಗಾದರೂ ಮಾಡಿ ಕೇಂದ್ರದಲ್ಲಿ ಅಧಿಕಾರಕ್ಕೆ ಬರಬೇಕೆಂದು ಕಾಂಗ್ರೆಸ್ ಪ್ರಯತ್ನ ಮಾಡಿತ್ತು. ಆದರೆ, ಗೆಲುವು ಸಾಧ್ಯವಾಗಿಲ್ಲ ಎಂದ ಅವರು, ಆರೋಪದಿಂದ ಅವರು ಏನೂ ಸಾಧನೆ ಮಾಡಲು ಸಾಧ್ಯವಾಗದು ಎಂದು ತಿಳಿಸಿದರು. ಬಿಜೆಪಿ ಚುನಾವಣಾ ಆಯೋಗವನ್ನು ದುರ್ಬಳಕೆ ಮಾಡಿಕೊಂಡಿದ್ದರೆ ನಾವು (ಬಿಜೆಪಿ) ಕರ್ನಾಟಕದಲ್ಲಿ ವಿಪಕ್ಷ ಸ್ಥಾನದಲ್ಲಿ ಕೂರುವ ಅವಶ್ಯಕತೆ ಇರಲಿಲ್ಲ ಎಂದು ಅವರು ತಿಳಿಸಿದರು. ಕಾಂಗ್ರೆಸ್ 66 ಶಾಸಕ ಸ್ಥಾನ ಪಡೆದರೆ, ಬಿಜೆಪಿ 136 ಸ್ಥಾನದಿಂದ ಅಧಿಕಾರಕ್ಕೆ ಏರುತ್ತಿತ್ತು ಎಂದು ವಿಶ್ಲೇಷಿಸಿದರು.
 
3 ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ ಗೆಲ್ಲುತ್ತಿತ್ತು. ಹಾಗಿದ್ದರೆ ಮೂರರಲ್ಲೂ ಕಾಂಗ್ರೆಸ್ ಗೆದ್ದದ್ದು ಹೇಗೆ ಎಂದು ಪ್ರಶ್ನಿಸಿದರು. ಇದು ಮೂರ್ಖತನದ ಪರಮಾವಧಿ ಎಂದು ವಿಜಯೇಂದ್ರ ಅವರು ಆಕ್ಷೇಪಿಸಿದರು. ಕಾಂಗ್ರೆಸ್ ಪಕ್ಷ ಮೂರ್ಖರ ಪಕ್ಷವಾಗಿದೆ ಎಂದು ಟೀಕಿಸಿದರು.
 
ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ- ಜೆಡಿಎಸ್ 19 ಸ್ಥಾನಗಳನ್ನು ಗೆದ್ದಿವೆ. ಹಾಗಿದ್ದರೆ ರಾಯಚೂರು, ದಾವಣಗೆರೆಯಲ್ಲಿ ಕಾಂಗ್ರೆಸ್ ಗೆದ್ದದ್ದು ಹೇಗೆ ಎಂದು ಕೇಳಿದರು. ಈ ರೀತಿ ಹುಚ್ಚಾಟ, ರಂಪಾಟದ ಮೂಲಕ ಸಾಂವಿಧಾನಿಕ ಸಂಸ್ಥೆ ಬಗ್ಗೆ ಕೂಡ ಅನುಮಾನ ವ್ಯಕ್ತಪಡಿಸುವುದು ಅಪಾಯಕಾರಿ ಬೆಳವಣಿಗೆ; ಇದು ಅಕ್ಷಮ್ಯ ಅಪರಾಧ ಎಂದು ಆಕ್ಷೇಪಿಸಿದರು.
 
4 ಅಥವಾ 5ರಂದು ಅವರು ಬಂದು ಏನು ಕಡಿದು ಕಟ್ಟೆ ಹಾಕುತ್ತಾರೆಂದು ಬಿಜೆಪಿ ನೋಡುತ್ತದೆ ಎಂದರು. ನಾವು ಕೂಡ ಕಾರ್ಯತಂತ್ರ ರೂಪಿಸುತ್ತೇವೆ ಎಂದು ತಿಳಿಸಿದರು. ಪ್ರಶ್ನೆಗೆ ಉತ್ತರಿಸಿದ ಅವರು, ಬಿಜೆಪಿ, ಮುಖ್ಯಮಂತ್ರಿ ಮನೆ ಮುಂದೆ ಪ್ರತಿಭಟನೆಗೆ ಮುಂದಾದರೆ ಕಮೀಷನರ್ ಅವರು ಹೈಕೋರ್ಟಿನ ಆದೇಶ ತೋರಿಸುತ್ತಾರೆ. ಸಿದ್ದರಾಮಯ್ಯನವರು ಎಲ್ಲಿಂದ ಬೇಕಿದ್ದರೂ ಪಾದಯಾತ್ರೆ ಮಾಡಬÀಹುದು, ರಾಹುಲ್ ಗಾಂಧಿಯವರು ಮೆರವಣಿಗೆ ಮಾಡಬಹುದು; ಇದು ಖಂಡಿತ ಸರಿಯಲ್ಲ ಎಂದು ಟೀಕಿಸಿದರು. ನಮಗೊಂದು ಕಾನೂನು, ಅವರಿಗೊಂದು ಕಾನೂನು ಇರಲು ಸಾಧ್ಯವಿಲ್ಲ ಎಂದರು. ಅವರಿಗೆ ಅವಕಾಶ ನೀಡಿದರೆ ನಾವೂ ಹೋರಾಟ ಮಾಡುತ್ತೇವೆ. ಅದನ್ನು ತಡೆಯಬಾರದು ಎಂದು ನುಡಿದರು.
 
ದಿಕ್ಕು ತೋಚದ ರಾಹುಲ್ ಗಾಂಧಿ
ರಾಹುಲ್ ಗಾಂಧಿಯವರು ಹತಾಶರಾಗಿದ್ದಾರೆ. ಅವರಿಗೆ ದಿಕ್ಕು ತೋಚುತ್ತಿಲ್ಲ. ಒಂದೆಡೆ ನ್ಯಾಷನಲ್ ಹೆರಾಲ್ಡ್ ಕೇಸಿನಲ್ಲಿ ಬೀದಿಗೆ ಬಂದಿದ್ದಾರೆ. ಜಾಮೀನಿನಲ್ಲಿ ಅವರಿದ್ದಾರೆ. ದೇಶದ ಯಾವುದೇ ರಾಜ್ಯಕ್ಕೆ ಹೋದರೂ ಅವರಿಗೆ ಕವಡೆ ಕಾಸಿನ ಕಿಮ್ಮತ್ತಿಲ್ಲ ಎಂದು ಬಿ.ವೈ. ವಿಜಯೇಂದ್ರ ಅವರು ತಿಳಿಸಿದರು.
ಕರ್ನಾಟಕದಲ್ಲಿ ಸಿದ್ದರಾಮಯ್ಯ ಮುಖ್ಯಮಂತ್ರಿ, ಡಿ.ಕೆ.ಶಿವಕುಮಾರ್ ಉಪ ಮುಖ್ಯಮಂತ್ರಿಯಾಗಿದ್ದಾರೆ. ಇಲ್ಲಿ ಬಂದು ಪುಂಗಿ ಊದುವ ಕೆಲಸ ಮಾಡುತ್ತಾರೆ. ಅವರು ಬರಲಿ ಎಂದು ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರು.
 
ಸಿದ್ದರಾಮಯ್ಯ ಅವರು ಶಾಸಕರ ಸಭೆಗೆ ಡಿ.ಕೆ.ಶಿವಕುಮಾರ್ ಅವರಿಗೆ ಆಹ್ವಾನ ಕೊಡದ ಕುರಿತ ಪ್ರಶ್ನೆಗೆ ಉತ್ತರ ಕೊಟ್ಟ ಅವರು, ಮುಖ್ಯಮಂತ್ರಿ, ಉಪ ಮುಖ್ಯಮಂತ್ರಿಗಳ ನಡುವೆ ನಾವು ವ್ಯತ್ಯಾಸ ಕಾಣುತ್ತಿದ್ದೇವೆ. ಮೈಸೂರಿನಲ್ಲಿ ನಡೆದ ಕಾಂಗ್ರೆಸ್ ಪಕ್ಷದ ಅಲ್ಲ; ಸಿದ್ದರಾಮಯ್ಯನವರ ಸಾಧನಾ ಸಮಾವೇಶದಲ್ಲಿ ಡಿ.ಕೆ.ಶಿವಕುಮಾರ್ ಅವರು ಯಾವ ರೀತಿ ಏಕಾಂಗಿಯಾಗಿ ವೇದಿಕೆ ಬಿಟ್ಟು ನಡೆದು ಹೋದುದನ್ನು ನೋಡಿದ್ದೀರಿ. ರಾತ್ರೋರಾತ್ರಿ ದೆಹಲಿಗೆ ಹೋದರು. ಒಟ್ಟಾರೆಯಾಗಿ ಆಡಳಿತ ಪಕ್ಷದಲ್ಲಿ ಶಾಸಕರ ಮಧ್ಯೆ ಇರುವ ವ್ಯತ್ಯಾಸ ಕಾಣಿಸುತ್ತಿದೆ. ಆಡಳಿತ ಪಕ್ಷದಲ್ಲಿ ಮುಖ್ಯಮಂತ್ರಿಗಳ ಬಗ್ಗೆ ವಿಶ್ವಾಸ ಕಳೆದುಹೋಗಿದೆ; ಮುಖ್ಯಮಂತ್ರಿಗಳೂ ವಿಚಲಿತರಾಗಿ ಮತ್ತೆ ಶಾಸಕರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಪ್ರಯತ್ನ ಮಾಡುತ್ತಿದ್ದಾರೆ ಎಂದರು.
 
ಕರ್ನಾಟಕದಲ್ಲಿ ದೀಪಾವಳಿ ಧಮಾಕಾ
50 ಕೋಟಿ ಅನುದಾನ ಎಲ್ಲಿ ಬಿಡುಗಡೆ ಮಾಡಿದ್ದಾರೆ ಸ್ವಾಮೀ? ಸಿದ್ದರಾಮಯ್ಯ ಅವರು ಹೇಳಿಕೆ ನೀಡಿ ಒಂದು ವಾರ ಕಳೆಯುತ್ತ ಬಂದಿದೆ. ಆಡಳಿತ ಪಕ್ಷದ ಶಾಸಕರಿಗೆ ಇವತ್ತಿಗೆ ಕೂಡ ಎಲ್ಲಿಯೂ ಅನುದಾನ ಬಿಡುಗಡೆ ಆಗಿಲ್ಲ ಎಂದು ಟೀಕಿಸಿದರು. ವಿಪಕ್ಷದ ಶಾಸಕರಿಗೆ 25 ಕೋಟಿ ಎಂಬ ಊಹಾಪೋಹವಿದ್ದು, ಅದನ್ನೂ ಕೊಟ್ಟಿಲ್ಲ. ಒಟ್ಟಾರೆಯಾಗಿ ಮುಂದಿನ ದೀಪಾವಳಿ ಧಮಾಕಾ ಕರ್ನಾಟಕದಲ್ಲಿ ಆಗುವುದು ಸತ್ಯ ಎಂದು ತಿಳಿಸಿದರು. ರಷ್ಯಾ- ಉಕ್ರೇನ್ ಯುದ್ಧ ನಿಲ್ಲಬಹುದು; ಇಲ್ಲಂತೂ ಯುದ್ಧ ಪ್ರಾರಂಭ ಆಗಲಿದೆ ಎಂದು ನುಡಿದರು.
 
 
 
 
 

Share this Story:

Follow Webdunia kannada

ಮುಂದಿನ ಸುದ್ದಿ

ನನ್ನನ್ನು ನಾನು ದ್ವೇಷಿಸುತ್ತೇನೆ, ನಾನು ಸೋತವನು: ಹೀಲಿಯಂ ಅನಿಲ ಸೇವಿಸಿ ಸಿಎ ಆತ್ಮಹತ್ಯೆ