Select Your Language

Notifications

webdunia
webdunia
webdunia
webdunia

ಜಾತಿಗಣತಿ ಮೂಲಕ ಹಿಂದೂ, ಮುಸ್ಲಿಮರನ್ನು ಒಡೆಯಲಾಗುತ್ತಿದೆ: ಬಿವೈ ವಿಜಯೇಂದ್ರ

BY Vijayendra

Krishnaveni K

ಬೆಳಗಾವಿ , ಮಂಗಳವಾರ, 15 ಏಪ್ರಿಲ್ 2025 (20:47 IST)
ಬೆಳಗಾವಿ: ಈಗ ಜಾತಿ ಜನಗಣತಿ ಎಂದು ಹೇಳಿಕೊಂಡು ಹಿಂದೂ- ಮುಸಲ್ಮಾನರನ್ನು ಒಡೆಯುವ ಕೆಲಸಕ್ಕೆ ಸಿದ್ದರಾಮಯ್ಯನವರು ಕೈ ಹಾಕಿದ್ದಾರೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಹಾಗೂ ಶಾಸಕ ಬಿ.ವೈ. ವಿಜಯೇಂದ್ರ ಅವರು ಆಕ್ಷೇಪಿಸಿದ್ದಾರೆ.
 
ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಪ್ರಶ್ನೆಗೆ ಉತ್ತರ ನೀಡಿದರು. ರಾಜ್ಯ ಸರಕಾರಕ್ಕೆ ಈ ಜಾತಿ ಜನಗಣತಿಗೆ ಅವಕಾಶ ಇಲ್ಲದಿದ್ದರೂ ಈ ಕ್ರಮಕ್ಕೆ ಮುಂದಾಗಿದ್ದಾರೆ ಎಂದು ಟೀಕಿಸಿದರು.
ಬ್ರಿಟಿಷರ ಒಡೆದಾಳುವ ನೀತಿಯನ್ನು ಕಾಂಗ್ರೆಸ್ ಪಕ್ಷವು ಈ ದೇಶದಲ್ಲಿ ಯಶಸ್ವಿಯಾಗಿ ಅನುಸರಿಸುತ್ತಿದೆ. ನಮ್ಮ ರಾಜ್ಯದಲ್ಲೂ ಅದನ್ನು ನೋಡಿದ್ದೀರಿ. ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯನವರು ಮುಖ್ಯಮಂತ್ರಿಗಳಾಗಿದ್ದಾಗ ವೀರಶೈವ- ಲಿಂಗಾಯತ ಪ್ರತ್ಯೇಕ ಧರ್ಮ ಎಂದು ಬೆಂಕಿ ಹಚ್ಚುವ ಕೆಲಸ ಮಾಡಿದ್ದರು. ಅದರಲ್ಲಿ ವಿಫಲರಾದರು ಎಂದು ವಿಶ್ಲೇಷಿಸಿದರು.
 
ಅಡ್ರೆಸ್ ಕಳಕೊಂಡ ಕಾಂಗ್ರೆಸ್ ಪಕ್ಷ..
ಇವತ್ತು ಬಾಬಾಸಾಹೇಬ ಡಾ.ಅಂಬೇಡ್ಕರರ ಹೆಸರು ಹೇಳುತ್ತಿದ್ದಾರೆ. ಅದೇರೀತಿ ಸಂವಿಧಾನದ ಬಗ್ಗೆ ಮಾತನಾಡುತ್ತಾರೆ. ಕಾಂಗ್ರೆಸ್ ಪಕ್ಷವು ಅಡ್ರೆಸ್ ಕಳಕೊಂಡಿದ್ದೇ ಇದಕ್ಕೆ ಕಾರಣ. 400ಕ್ಕೂ ಹೆಚ್ಚು ಸಂಸದರನ್ನು ಹೊಂದಿದ್ದ ಕಾಂಗ್ರೆಸ್ ಪಕ್ಷವು ವಿಪಕ್ಷದಲ್ಲಿ ಕೂರಲು ಕೂಡ ಪರದಾಡಬೇಕಾಗಿದೆ ಎಂದು ತಿಳಿಸಿದರು. ಕಾಂಗ್ರೆಸ್ಸಿನವರಿಗೆ ಈಗ ಬಾಬಾಸಾಹೇಬ ಡಾ.ಅಂಬೇಡ್ಕರರು, ಮುಸಲ್ಮಾನರೂ ನೆನಪಾಗುತ್ತಿದ್ದಾರೆ. ಕಾಂಗ್ರೆಸ್ಸಿನವರು ಮುಸಲ್ಮಾನರನ್ನು ಮತಬ್ಯಾಂಕ್ ರಾಜಕೀಯಕ್ಕೆ ಬಳಸುತ್ತಿದ್ದಾರೆ ಎಂದು ಬಿ.ವೈ. ವಿಜಯೇಂದ್ರ ಅವರು ಆರೋಪಿಸಿದರು.
 
ಪರಿಶಿಷ್ಟ ಜಾತಿ- ಪಂಗಡದವರನ್ನು ಮತಬ್ಯಾಂಕ್ ರಾಜಕೀಯಕ್ಕೆ ಬಳಸಲು ಕೈಹಾಕಿದ್ದಾರೆಯೇ ವಿನಾ ಇದರಲ್ಲಿ ಕಾಂಗ್ರೆಸ್ ಪಕ್ಷದ್ದಾಗಲೀ ಸಿದ್ದರಾಮಯ್ಯನವರದ್ದಾಗಲೀ ಪ್ರಾಮಾಣಿಕತೆ ಇಲ್ಲ ಎಂದು ತಿಳಿಸಿದರು.
 
50ಕ್ಕೂ ಹೆಚ್ಚು ಅಗತ್ಯ ವಸ್ತುಗಳ ಬೆಲೆ ಏರಿಸಿದ್ದರಿಂದ ಕರ್ನಾಟಕವು ಅತ್ಯಂತ ದುಬಾರಿ ರಾಜ್ಯ ಎನಿಸಿದೆ. ಪೆಟ್ರೋಲ್- ಡೀಸೆಲ್ ದರ ಏರಿಸಿದ್ದೂ ಇದಕ್ಕೆ ಕಾರಣ ಎಂದು ತಿಳಿಸಿದರು. ಇದರಿಂದ ರಾಜ್ಯದ ಜನರು ಆಕ್ರೋಶದಲ್ಲಿದ್ದಾರೆ. ಸಿದ್ದರಾಮಯ್ಯನವರ ಒಡೆದಾಳುವ ನೀತಿ, ಬೆಲೆ ಏರಿಕೆ ನೀತಿ, ಪರಿಶಿಷ್ಟ ಜಾತಿ, ಪಂಗಡಗಳಿಗೆ ದ್ರೋಹ ಬಗೆದುದನ್ನು ರಾಜ್ಯದ ಜನರ ಮುಂದೆ ಬಿಚ್ಚಿಡುತ್ತಿದ್ದೇವೆ ಎಂದು ಹೇಳಿದರು.
 
ಸರಕಾರದಿಂದ ಬೂಟಾಟಿಕೆಯ ಹೇಳಿಕೆ
ಜಾತಿ ಗಣತಿ ಸಂಬಂಧ ಮೀಸಲಾತಿ ಅನುಷ್ಠಾನ ಮಾಡುವುದೂ ಇಲ್ಲ; ಅದು ಸಾಧ್ಯವೂ ಇಲ್ಲ. 10 ವರ್ಷ ಕಳೆದ ಈ ವರದಿ ಹಳೆಯದು. ಹಿಂದುಳಿದ ಆಯೋಗದ ಪ್ರಕಾರವೂ 10 ವರ್ಷಕ್ಕೊಮ್ಮೆ ಇದಾಗಬೇಕು. ಅನುಷ್ಠಾನ ಸಂಬಂಧ ಹೇಳಿಕೆ ಕೇವಲ ಬೂಟಾಟಿಕೆ ಎಂದು ವಿಜಯೇಂದ್ರ ಅವರು ತಿಳಿಸಿದರು. ಜನಾಕ್ರೋಶ ಯಾತ್ರೆ ಯಶಸ್ವಿಯಾಗಿ ನಡೆಯುತ್ತಿದೆ ಎಂದು ವಿವರಿಸಿದರು.
 
ಬಿಜೆಪಿ ಹಿಂದುಳಿದ ಸಮುದಾಯಗಳು, ಶೋಷಿತ, ಪೀಡಿತ ಸಮುದಾಯಗಳ ಪರ
ರಾಜ್ಯದಲ್ಲಿರುವ ಹಿಂದುಳಿದ ಸಮುದಾಯಗಳು, ಶೋಷಿತ, ಪೀಡಿತ ಸಮುದಾಯಗಳಿಗೆ ಆರ್ಥಿಕ, ಶೈಕ್ಷಣಿಕ, ಸಾಮಾಜಿಕವಾಗಿ ನ್ಯಾಯ ಸಿಗಬೇಕೆಂಬ ಬದ್ಧತೆ ಬಿಜೆಪಿಗೆ ಇದೆ. ಆದರೆ, ಸಿದ್ದರಾಮಯ್ಯನವರು ಈ ವಿಚಾರವನ್ನು ಇಟ್ಟುಕೊಂಡು ತಮ್ಮ ರಾಜಕೀಯ ಬುಡವನ್ನು ಭದ್ರಗೊಳಿಸುವ ಷಡ್ಯಂತ್ರ ಮಾಡುತ್ತಿದ್ದಾರೆ. 2015ರಲ್ಲೇ ಕಾಂತರಾಜ್ ವರದಿ ಬಂದಿತ್ತು. ಸಿದ್ದರಾಮಯ್ಯನವರು 4 ವರ್ಷ ಏನು ಮಾಡಿದ್ದಾರೆ? ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಪ್ರಾಮಾಣಿಕ ಕಳಕಳಿ ಇದ್ದರೆ ಹಿಂದಿನ ಮುಖ್ಯಮಂತ್ರಿ ಅವಧಿಯಲ್ಲೇ ಯಾಕೆ ಅನುಷ್ಠಾನಕ್ಕೆ ತಂದಿಲ್ಲ ಎಂದು ಕೇಳಿದರು.

ಈಗ ಕಾಂಗ್ರೆಸ್ ಸರಕಾರ ಬಂದು 20 ತಿಂಗಳಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಕೊಡುವ ದಿನಗಳು ಹತ್ತಿರ ಬಂದಿದೆ. ಮುಖ್ಯಮಂತ್ರಿ ಸ್ಥಾನವನ್ನು ಬೇರೊಬ್ಬರಿಗೆ ಬಿಟ್ಟು ಕೊಡಬೇಕಾಗುತ್ತದೆ. ಹಾಗಾಗಿ ಬೆಂಕಿ ಹಚ್ಚಲು ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಟೀಕಿಸಿದರು.
 
ಕೇಂದ್ರವು ಪೆಟ್ರೋಲ್, ಡೀಸೆಲ್ ಮೇಲೆ 2 ರೂ. ಏರಿಸಿದ್ದರೂ ಆ ಹೊರೆಯನ್ನು ಮೋದಿಯವರು ಜನಸಾಮಾನ್ಯರ ಮೇಲೆ ಹಾಕಿಲ್ಲ. ತೈಲ ಕಂಪೆನಿಗಳೇ ಅದನ್ನು ಭರಿಸುತ್ತಿವೆ. ಮುಖ್ಯಮಂತ್ರಿಗಳೇ, ಕಳೆದ 20 ತಿಂಗಳಲ್ಲಿ ಡೀಸೆಲ್ ಬೆಲೆ ಐದೂವರೆ ರೂ. ಜಾಸ್ತಿ ಮಾಡಿದ್ದೀರಿ. ಪೆಟ್ರೋಲ್ ಮೇಲೆ 3 ರೂ. ಹೆಚ್ಚಿಸಿದ್ದೀರಿ. ಯಾವ ಪುರುಷಾರ್ಥಕ್ಕೆ ಮಾಡಿದ್ದೀರಿ ಎಂದು ಪ್ರಶ್ನಿಸಿದರು.
 
ಅಭಿವೃದ್ಧಿ- ನೀರಾವರಿಗೆ ಹಣ ಕೊಟ್ಟಿದ್ದೀರಾ?
ಆ ಹಣವನ್ನು ಅಭಿವೃದ್ಧಿ ಕಾರ್ಯಕ್ಕೆ ಕೊಟ್ಟಿದ್ದೀರಾ? ಉತ್ತರ ಕರ್ನಾಟಕದ ನೀರಾವರಿ ಯೋಜನೆಗೆ ಕೊಟ್ಟಿದ್ದೀರಾ? ಕಾಂಗ್ರೆಸ್ ನಡಿಗೆ ಕೃಷ್ಣೆಯ ಕಡೆಗೆ ಎಂದರು. 10 ಸಾವಿರ ಕೋಟಿ ಕೊಡುವುದಾಗಿ ಹೇಳಿದರು. ಏನು ಕೊಟ್ಟಿದ್ದಾರೆ ಬದನೆಕಾಯಿ ಎಂದು ಪ್ರಶ್ನೆಯನ್ನು ಮುಂದಿಟ್ಟರು.
 

Share this Story:

Follow Webdunia kannada

ಮುಂದಿನ ಸುದ್ದಿ

ನ್ಯಾಷನಲ್ ಹೆರಾಲ್ಡ್ ಪ್ರಕರಣದ ಚಾರ್ಜ್‌ಶೀಟ್‌ ಸಲ್ಲಿಕೆ: ಸೋನಿಯಾ, ರಾಹುಲ್‌ ಗಾಂಧಿಗೆ ಕಾದಿದ್ಯಾ ಸಂಕಷ್ಟ