ಬೆಂಗಳೂರು: ಹಿರಿಯ ನಟ ದಿವಂಗತ ಟಿ.ಎನ್. ಬಾಲಕೃಷ್ಣ ಅವರಿಗೆ ಅಭಿಮಾನ್ ಸ್ಟುಡಿಯೊ ನಿರ್ಮಾಣಕ್ಕಾಗಿ ಮಂಜೂರು ಮಾಡುವಾಗ ವಿಧಿಸಿದ್ದ ಷರತ್ತುಗಳ ಉಲ್ಲಂಘನೆಯಾಗಿದೆ. ಹೀಗಾಗಿ, ಜಮೀನನ್ನು ವಶಕ್ಕೆ ಪಡೆದು ಸಸ್ಯೋದ್ಯಾನ ಮಾಡಲಾಗುವುದು ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಹೇಳಿದರು.
ನಟ ವಿಷ್ಣುವರ್ಧನ್ ಅವರ ಸಮಾಧಿ ತೆರವಿನಿಂದ ವಿವಾದಕ್ಕೆ ಗುರಿಯಾಗಿದ್ದ ಕೆಂಗೇರಿಯ ಅರಣ್ಯ ಭೂಮಿ ಅರಣ್ಯ ಇಲಾಖೆಗೆ ಮರಳಿ ಬಂದರೆ ಅಲ್ಲಿ ಒಂದು ಸಸ್ಯೋದ್ಯಾನ ನಿರ್ಮಿಸಲಾಗುವುದು. ಬೆಂಗಳೂರು ವ್ಯಾಪಕವಾಗಿ ಬೆಳೆದಿದ್ದು, ಶ್ವಾಸತಾಣಗಳ ಅಗತ್ಯವಿದೆ ಎಂದರು.
1980ರ ಅರಣ್ಯ ಸಂರಕ್ಷಣಾ ಕಾಯ್ದೆ ಜಾರಿಗೆ ಬರುವ ಮೊದಲು ಈ ಅರಣ್ಯ ಭೂಮಿಯ ಪೈಕಿ 20 ಎಕರೆ ಪ್ರದೇಶವನ್ನು ಸ್ಟುಡಿಯೊ ನಿರ್ಮಿಸುವ ಸಲುವಾಗಿ ಟಿ.ಎನ್.ಬಾಲಕೃಷ್ಣ ಅವರಿಗೆ 1969ರಲ್ಲಿ ಒಂದು ಎಕರೆಗೆ ₹300ರಂತೆ ಒಟ್ಟು ₹6 ಸಾವಿರದಂತೆ 20 ಎಕರೆ ಪ್ರದೇಶವನ್ನು ಷರತ್ತುಬದ್ಧವಾಗಿ ಮಂಜೂರು ಮಾಡಲಾಗಿತ್ತು
22 ವರ್ಷಗಳ ಹಿಂದೆ ಆ ಜಮೀನಿನಲ್ಲಿ 10 ಎಕರೆ ಪ್ರದೇಶವನ್ನು ಬಾಲಕೃಷ್ಣ ಅವರ ಮಕ್ಕಳು ಸರ್ಕಾರದಿಂದ ಪೂರ್ವಾನುಮತಿ ಪಡೆದು ಮಾರಾಟ ಮಾಡಿದ್ದಾರೆ. ಮಾರಾಟದಿಂದ ಬಂದ ಹಣದಿಂದ ಸ್ಟುಡಿಯೊ ಅಭಿವೃದ್ಧಿಪಡಿಸಬೇಕೆಂದು ಷರತ್ತು ಹಾಕಲಾಗಿತ್ತು. ಆದರೆ, ಈವರೆಗೆ ಯಾವುದೇ ಅಭಿವೃದ್ಧಿ ಆಗಿಲ್ಲ ಎಂದು ಹೇಳಿದರು.
ಉಳಿದ 10 ಎಕರೆ ಜಮೀನನ್ನೂ ಮಾರಾಟ ಮಾಡಲು ಮುಂದಾಗಿರುವುದು ಷರತ್ತಿನ ಉಲ್ಲಂಘನೆಯಾಗಿದೆ. ಈ ಅರಣ್ಯ ಭೂಮಿಯನ್ನು ಇಲಾಖೆಗೆ ಮರಳಿಸುವಂತೆ ಕಂದಾಯ ಇಲಾಖೆಗೆ ಪತ್ರ ಬರೆಯಲಾಗಿದೆ ಎಂದರು.
ಡಾ. ವಿಷ್ಣು ಸೇನಾ ಸಮಿತಿಯ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ್ ಅವರು ವಿಷ್ಣುವರ್ಧನ್ ಸ್ಮಾರಕ ಕುರಿತಂತೆ ಈಶ್ವರ ಖಂಡ್ರೆ ಅವರಿಗೆ ಶನಿವಾರ ಮನವಿ ಸಲ್ಲಿಸಿದರು. ವಿಷ್ಣುವರ್ಧನ್ ಸ್ಮಾರಕಕ್ಕೆ ಜಮೀನು ನೀಡಲಾಗುವುದೇ ಎಂಬ ಪ್ರಶ್ನೆಗೆ, ಈ ಬಗ್ಗೆ ಸರ್ಕಾರ ನಿಯಮಾನುಸಾರ ತೀರ್ಮಾನಿಸಲಿದೆ ಎಂದು ಸಚಿವರು ಹೇಳಿದರು.