Publish Date: Tue, 07 Feb 2023 (18:36 IST)
Updated Date: Tue, 07 Feb 2023 (18:51 IST)
ಲಾಡ್ಜ್ ನಲ್ಲಿ ಬಿಎಂಟಿಸಿ ಚಾಲಕನ ಅನುಮಾನಾಸ್ಪದ ಸಾವು ಪ್ರಕರಣ ಕೊಲೆಯೋ ಆತ್ಮಹತ್ಯೆಯೋ ಎಂಬ ಅನುಮಾನಕ್ಕೆ ತೆರೆ ಬಿದ್ದಿದ್ದು, ವಿವಾಹಿತಳ ಹಿಂದೆ ಬಿದ್ದ ಚಾಲಕ ಪುಟ್ಟೇಗೌಡ ಆಕೆ ನಿರಾಕರಿಸಿದಾಗ ಬೇಸತ್ತು ಆತ್ಮಹತ್ಯೆಗೆ ಶರಣಾಗಿರುವುದು ಕೆಂಗೇರಿ ಠಾಣಾ ಪೊಲೀಸರ ತನಿಖೆಯಲ್ಲಿ ಬಯಲಾಗಿದೆ.
ಚೆನ್ನಪಟ್ಟಣ ಮೂಲದ ಪುಟ್ಟೇಗೌಡನಿಗೆ ಕೇವಲ ಆರು ತಿಂಗಳ ಹಿಂದೆಯಷ್ಟೇ ವಿವಾಹಿತ ಮಹಿಳೆಯೊಬ್ಬಳ ಪರಿಚಯವಾಗಿತ್ತು. ತಮ್ಮ ಊರಿನ ಪಕ್ಕದ ಊರಿನವಳೇ ಆಗಿದ್ದ ಮಹಿಳೆಯೊಂದಿಗೆ ಸ್ನೇಹ ಬಳಿಕ ಸಂಬಂಧಕ್ಕೆ ತಿರುಗಿತ್ತು. ಇತ್ತೀಚೆಗೆ ಆಕೆಯನ್ನ ತನ್ನ ಜೊತೆಯಲ್ಲೇ ಇರುವಂತೆ ಪುಟ್ಟೇಗೌಡ ಒತ್ತಾಯಿಸುತ್ತಿದ್ದ.'ಇಬ್ಬರು ಮಕ್ಕಳಿರುವ ತಾನು ನಿನ್ನ ಜೊತೆಯಲ್ಲಿದ್ದು ಮುಂದುವರೆಯಲು ಸಾಧ್ಯವಿಲ್ಲ' ಎಂದು ಪುಟ್ಟೇಗೌಡನಿಗೆ ಆ ಮಹಿಳೆ ಹೇಳಿದ್ದಳು.
ಜನವರಿ 30 ರಂದು ಕೆಲಸಕ್ಕೆಂದು ಬಂದಿದ್ದ ಪುಟ್ಟೇಗೌಡ ನೇರವಾಗಿ ಲಾಡ್ಜ್ ಗೆ ಬಂದು ಅದೇ ಮಹಿಳೆಯನ್ನ ಕರೆಸಿಕೊಂಡು ಲೈಂಗಿಕ ಸಂಪರ್ಕ ಹೊಂದಿದ್ದ. ಒಂದು ಗಂಟೆಗಳ ಕಾಲ ಜೊತೆಯಲ್ಲೇ ಕಳೆದ ಬಳಿಕ ಮತ್ತೆ ಜೊತೆಯಲ್ಲೇ ಇರುವಂತೆ ಆಕೆಯೊಂದಿಗೆ ಕ್ಯಾತೆ ತೆಗೆದಿದ್ದ. ಇತ್ತ ಆಕೆ ನಿದ್ರೆಗೆ ಜಾರಿದಾಗ ಬಾತ್ ರೂಮಿಗೆ ತೆರಳಿ ನೇಣುಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದ. ಎಚ್ಚರವಾದ ಬಳಿಕ ಗಮನಿಸಿದ ಮಹಿಳೆ ಭಯದಿಂದ ಹೆದರಿ ರೂಮ್ ಲಾಕ್ ಮಾಡಿಕೊಂಡು ತೆರಳಿದ್ದಳು. ಲಾಡ್ಜ್ ಸಿಸಿಟಿವಿ ದೃಶ್ಯಗಳನ್ನ ಆಧರಿಸಿ ಆ ಮಹಿಳೆಯನ್ನ ಪತ್ತೆಹಚ್ಚಿದ ಪೊಲೀಸರು ಆಕೆಯ ಹೇಳಿಕೆ ದಾಖಲಿಸಿದ್ದಾರೆ. ಇತ್ತ ಮರಣೋತ್ತರ ಪರೀಕ್ಷಾ ವರದಿಯಲ್ಲಿ ಪುಟ್ಟೇಗೌಡ ಆತ್ಮಹತ್ಯೆಗೆ ಶರಣಾಗಿರುವುದು ಬಯಲಾಗಿದೆ ಎಂದು ಕೆಂಗೇರಿ ಪೊಲೀಸರು ತಿಳಿಸಿದ್ದಾರೆ.