Publish Date: Wed, 29 Mar 2023 (08:39 IST)
Updated Date: Wed, 29 Mar 2023 (09:55 IST)
ರಾಮನಗರ : ರಾಜ್ಯ ವಿಧಾನಸಭಾ ಚುನಾವಣೆಯ ನೀತಿಸಂಹಿತೆ ಘೋಷಣೆಗೆ ಕೆಲವೇ ದಿನಗಳು ಬಾಕಿ ಇದೆ. ಇದರ ನಡುವೆಯೇ ಜೆಡಿಎಸ್ ಭದ್ರಕೋಟೆಯಲ್ಲಿ ಕಮಲ ಅರಳಿಸಲು ಬಿಜೆಪಿ ಅಂತಿಮ ಕಸರತ್ತು ನಡೆಸಿದೆ.
ರಾಮಜಪ ಮಾಡುವ ಮೂಲಕ ಹಿಂದೂಮತಗಳ ಕ್ರೋಢೀಕರಿಸಲು ತಂತ್ರ ರೂಪಿಸಿರೋ ಬಿಜೆಪಿ ಶೀಘ್ರದಲ್ಲೇ ರಾಮಮಂದಿರ ನಿರ್ಮಾಣಕ್ಕೆ ಶಂಕುಸ್ಥಾಪನೆ ಮಾಡಲು ಮುಂದಾಗಿದೆ. ರಾಮದೇವರ ಬೆಟ್ಟ ಅಭಿವೃದ್ಧಿ ಸಂಬಂಧ ನೀಲ ನಕ್ಷೆ ಸಿದ್ದಪಡಿಸಿ 40 ಲಕ್ಷ ಅನುದಾನ ಘೋಷಣೆ ಮಾಡಿದೆ.
2023ರ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಇನ್ನೆರಡು-ಮೂರು ದಿನಗಳಲ್ಲಿ ನೀತಿಸಂಹಿತೆ ಜಾರಿಯಾಗಲಿದ್ದು, ಇದಕ್ಕೂ ಮುನ್ನವೇ ರಾಮಮಂದಿರದ ಶಂಕುಸ್ಥಾಪನೆ ಮಾಡಲು ಬಿಜೆಪಿ ಸಿದ್ಧತೆ ನಡೆಸಿದೆ. ರಾಮನಗರದಲ್ಲಿ ರಾಮಮಂದಿರ ನಿರ್ಮಾಣ ಮಾಡಿ ದಕ್ಷಿಣ ಅಯೋಧ್ಯೆಯನ್ನಾಗಿ ರಾಮದೇವರ ಬೆಟ್ಟ ಅಭಿವೃದ್ಧಿಗೊಳಿಸುವುದಾಗಿ ಬಿಜೆಪಿ ಸರ್ಕಾರ ಬಜೆಟ್ನಲ್ಲಿ ಘೋಷಣೆ ಮಾಡಿತ್ತು.
ನಿನ್ನೆಯಷ್ಟೇ ರಾಮನಗರಕ್ಕೆ ಆಗಮಿಸಿದ ಸಿಎಂ ಬೊಮ್ಮಾಯಿ ರಾಮನ ಇತಿಹಾಸ ಮತ್ತು ಖ್ಯಾತಿಯನ್ನ ಮರುಸೃಷ್ಠಿ ಮಾಡುತ್ತೇವೆ. ರಾಮಮಂದಿರ ನಿರ್ಮಾಣಕ್ಕೆ ನಮ್ಮ ಸರ್ಕಾರ ಬದ್ಧ ಎಂದು ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಇಂದು ದೇವಾಲಯ ಅಭಿವೃದ್ಧಿ ಸಂಬಂಧ ಬ್ಲೂ ಪ್ರಿಂಟ್ ಸಿದ್ಧಪಡಿಸಿರೋ ಸರ್ಕಾರ 40 ಲಕ್ಷ ಅನುದಾನ ಬಿಡುಗಡೆ ಮಾಡಿದೆ.