Publish Date: Tue, 10 Oct 2017 (15:39 IST)
Updated Date: Tue, 10 Oct 2017 (15:43 IST)
ಮಂಗಳೂರು: ತುಳುನಾಡಿನ ಮಹಾಮಾತೆ ದೇಯಿಬೈದೆತಿ ವಿಗ್ರಹವನ್ನು ಅವಮಾನಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಕ್ತಿ ಕೇಂದ್ರಗಳ ರಕ್ಷಣೆಗಾಗಿ ಬೃಹತ್ ಪಾದಯಾತ್ರೆಗೆ ನಳಿನ್ ಕುಮಾರ್ ಕಟೀಲ್ ಚಾಲನೆ ನೀಡಿದರು.
ಹಿಂದೂ ಸಮಾಜದ ಭಕ್ತರ ಭಾವನೆಗೆ ವಿರುದ್ಧವಾಗಿ ವರ್ತಿಸಿದ ಮತಾಂಧ ವ್ಯಕ್ತಿಗಳ ವಿರುದ್ಧ ಮತ್ತು ಜಿಲ್ಲೆಯ ಶಕ್ತಿಕೇಂದ್ರಗಳ ರಕ್ಷಣೆಗಾಗಿ ಬಿಜೆಪಿ ಬೃಹತ್ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಚಾಲನೆ ನೀಡುವುದಕ್ಕೂ ಮುನ್ನ ಸಂಸದ ನಳಿನ್ ಕುಮಾರ್ ಕಟೀಲ್ ಪುತ್ತೂರಿನಲ್ಲಿ ಶ್ರೀ ಮಹಾಲಿಂಗೇಶ್ವರ ದೇವರಿಗೆ ಹಾಗೂ ನಾರಾಯಣ ಗುರು ಮಂದಿರಕ್ಕೆ ತೆರಳಿ ಪೂಜೆ ಸಲ್ಲಿಸಿದ ಬಳಿಕ ಬೃಹತ್ ಪಾದಯಾತ್ರೆಗೆ ಚಾಲನೆ ನೀಡಿದರು.
ತುಳುನಾಡಿನ ವೀರ ಪುರುಷರಾದ "ಅಮರ್ ಬೊಳ್ಳಿಲು" ಕೋಟಿ ಚೆನ್ನಯ್ಯರಿಗೆ ಜನ್ಮ ನೀಡಿದ ಮಹಾಮಾತೆ ಅಪ್ಪೆ ದೇಯಿ ಬೈದೆತಿ ವಿಗ್ರಹಕ್ಕೆ ಅವಮಾನ ಮಾಡಲಾಗಿತ್ತು. ಇದು ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟು ಮಾಡಿತ್ತು. ಬ್ರಹತ್ ಪಾದಯಾತ್ರೆಯಲ್ಲಿ ದಕ್ಷಿಣ ಕನ್ನಡ ಬಿಜೆಪಿ ಯುವ ಮೋರ್ಚಾ ಜಿಲ್ಲಾಧ್ಯಕ್ಷ ಹರೀಶ್ ಪೂಂಜಾ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.