Publish Date: Thu, 24 Jan 2019 (07:22 IST)
Updated Date: Thu, 24 Jan 2019 (07:23 IST)
ಬೆಳಗಾವಿ : ಸಿದ್ದಗಂಗಾ ಶ್ರೀಗಳು ಶಿವೈಕ್ಯರಾಗಿರುವ ಹಿನ್ನೆಲೆಯಲ್ಲಿ ಸರ್ಕಾರ ರಾಜ್ಯಾದ್ಯಂತ ಮೂರು ದಿನಗಳ ಕಾಲ ಶೋಕಾಚಾರಣೆ ಘೋಷಿದರೂ ಬೆಳಗಾವಿ ಜಿಲ್ಲೆಯ ರಾಯಬಾಗದ ಬಿಜೆಪಿ ಶಾಸಕ ದುರ್ಯೋಧನ ಐಹೊಳೆ ಅವರು 63ನೇ ಜನ್ಮದಿನವನ್ನು ಅದ್ಧೂರಿಯಾಗಿ ಆಚರಿಸಿಕೊಂಡಿದ್ದಾರೆ.
ಜನ್ಮದಿನದ ನಿಮಿತ್ತ ಶಾಸಕರು ಹಾಗೂ ಧರ್ಮ ಪತ್ನಿ ಅವರನ್ನು ರಾಯಬಾಗ ಪಟ್ಟಣದಲ್ಲಿ ಮೆರವಣಿಗೆ ಮಾಡಿ, ಬಳಿಕ ವೇದಿಕೆಗೆ ಕರೆತರಲಾಗಿತ್ತು. ಈ ಕಾರ್ಯಕ್ರಮಕ್ಕೆ ಅನೇಕರಿಗೆ ಆಮಂತ್ರಣ ನೀಡಿದ್ದರಿಂದ ಸಾವಿರಾರು ಜನರು ಶಾಸಕರ ಈ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಸಂಜೆಯೂ ಗಾಯನ ಸ್ಪರ್ಧೆ ಹೆಸರಿನಲ್ಲಿ ಮನರಂಜನೆ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು.
ಸಾರೋಟದಲ್ಲಿ ಶಿವಕುಮಾರ ಶ್ರೀಗಳ ಭಾವ ಚಿತ್ರ ಇಟ್ಟು ಪೂಜೆ ಮಾಡಲಾಗಿತ್ತು. ಆದರೆ ಇದೆಲ್ಲಾ ಹೆಸರಿಗೆ ಮಾತ್ರವೆಂದು ಹಾಗೂ ಶೋಕಾಚರಣೆ ಮತ್ತು ಭೀಕರ ಬರಗಾಲದ ನಡುವೆಯೂ ಶಾಸಕರು ಜನ್ಮದಿನಕ್ಕೆ ಲಕ್ಷಾಂತರ ಹಣ ಖರ್ಚು ಮಾಡಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಶೋಕಾಚರಣೆ ದಿನ ಕಾಂಗ್ರೆಸ್ ನ ಸಚಿವ ಪ್ರಿಯಾಂಕ ಖರ್ಗೆ ಸರ್ಕಾರಿ ಕಾರ್ಯಕ್ರಮ ಆಯೋಜನೆ ಮಾಡಿದ್ದಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು. ಆದರೆ ಇದೀಗ ಶಾಸಕ ದುರ್ಯೋಧನ ಐಹೊಳೆ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದು ಬಿಜೆಪಿಗೆ ಸಾಕಷ್ಟು ಮುಜುಗುರಕ್ಕೀಡುಮಾಡಿದೆ ಎನ್ನಲಾಗಿದೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ.