Publish Date: Sat, 16 Sep 2017 (15:45 IST)
Updated Date: Sat, 16 Sep 2017 (15:49 IST)
ಬಿಜೆಪಿ ನಾಯಕರ ಢೋಂಗಿ ಹೋರಾಟ ರಾಜ್ಯದ ಜನತೆಗೆ ಗೊತ್ತಿದೆ ಎಂದು ಕೃಷಿ ಖಾತೆ ಸಚಿವ ಕೃಷ್ಣ ಭೈರೇಗೌಡ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿವೈಎಸ್ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣದಲ್ಲಿ ಸಿಐಡಿ ತನಿಖೆ ನಡೆಯುತ್ತಿರುವಾಗ ಸಚಿವ ಕೆ.ಜೆ.ಜಾರ್ಜ್ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ತನಿಖೆ ಎದುರಿಸಿದ್ದನ್ನು ಬಿಜೆಪಿಯವರು ಮರೆಯಬಾರದು. ಸಿಐಡಿ ತನಿಖೆಯಲ್ಲಿ ಜಾರ್ಜ್ ನಿರಪರಾಧಿ ಎಂದು ಸಾಬೀತಾಗಿದ್ದರು ಎಂದು ತಿಳಿಸಿದ್ದಾರೆ.
ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಬೆಂಗಳೂರಿಗೆ ಬಂದಿದ್ದಾಗ ಗಣಪತಿ ಪ್ರಕರಣದ ಹೋರಾಟ ಕೈಗೆತ್ತಿಕೊಳ್ಳುವಂತೆ ಬಿಜೆಪಿ ನಾಯಕರಿಗೆ ಸಲಹೆ ನೀಡಿದ್ದಾರೆ. ಅದರಂತೆ ಒಲ್ಲದ ಮನಸ್ಸಿನಿಂದ ಬಿಜೆಪಿ ನಾಯಕರು ಹೋರಾಟ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಅಮಿತ್ ಶಾ ಅವರನ್ನು ಮೆಚ್ಚಿಸಲು ಬಿಜೆಪಿ ನಾಯಕರು ಹೋರಾಟ ಮಾಡುತ್ತಿದ್ದಾರೆಯೇ ನಿಜವಾದ ಕಳಕಳಿಯಿಂದಲ್ಲ. ಹಿಂದೆ ಕೂಡಾ ಡಿ.ಕೆ.ರವಿ ಪ್ರಕರಣದಲ್ಲೂ ಇದೇ ರೀತಿ ಹೋರಾಟ ಮಾಡಿದ್ದರು. ಸರಕಾರ ಪ್ರಕರಣನ್ನು ಸಿಬಿಐಗೆ ವಹಿಸಿತ್ತು. ರಾಷ್ಟ್ರೀಯ ಸುದ್ದಿ ಚಾನೆಲ್ಗಳಲ್ಲಿ ತಪ್ಪು ಸುದ್ದಿ ಬರುವಂತೆ ಬಿಜೆಪಿಯವರು ಸಂಚು ರೂಪಿಸಿದ್ದರು ಎಂದು ಕಿಡಿಕಾರಿದ್ದಾರೆ.
ಸಿಬಿಐ ತನಿಖೆಯಲ್ಲಿ ಐಎಎಸ್ ಅಧಿಕಾರಿ ಡಿ.ಕೆ.ರವಿಯದ್ದು ಆತ್ಮಹತ್ಯೆ ಎನ್ನುವುದು ಬಹಿರಂಗವಾಗಿತ್ತು. ಇದರಿಂದ ಬಿಜೆಪಿಗೆ ಯಾವುದೇ ಲಾಭವಾಗಲಿಲ್ಲ ಎಂದು ಕೃಷಿ ಸಚಿವ ಕೃಷ್ಣ ಭೈರೇಗೌಡ ಟಾಂಗ್ ನೀಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.