Publish Date: Wed, 03 Oct 2018 (17:51 IST)
Updated Date: Wed, 03 Oct 2018 (17:53 IST)
ದೋಸ್ತಿ ಸರಕಾರದವರ ಟೆಂಪಲ್ ರನ್ ವಿಚಾರಕ್ಕೆ ಸಂಬಂಧಿಸಿದಂತೆ ವಿಪಕ್ಷ ನಾಯಕ ಹೇಳಿಕೆ ನೀಡಿದ್ದು, ಧಾರ್ಮಿಕತೆ ಬಗ್ಗೆ ತಡವಾಗಿಯಾದರೂ ತಿಳಿದಿದ್ದು ಖುಷಿ ಸಂಗತಿ ಎಂದು ಟಾಂಗ್ ನೀಡಿದ್ದಾರೆ.
ಧಾರ್ಮಿಕತೆ ಬಗ್ಗೆ ತಡವಾಗಿಯಾದರೂ ಮೈತ್ರಿ ಸರಕಾರದ ಮುಖಂಡರಿಗೆ ತಿಳಿದಿದ್ದು ಖುಷಿ ಸಂಗತಿ. ಆದರೆ ರಾಜ್ಯದ ಕಾನೂನು ಸುವ್ಯವಸ್ಥೆ ಕಾಪಾಡುವುದ್ಯಾರು? ಹೀಗಂತ ಕುಂದಾಪುರದಲ್ಲಿ ಕೋಟ ಶ್ರೀನಿವಾಸ ಪೂಜಾರಿ ಪ್ರಶ್ನೆ ಮಾಡಿದ್ದಾರೆ.
ವಿಧಾನ ಪರಿಷತ್ ವಿಪಕ್ಷ ನಾಯಕರಾಗಿರುವ ಕೋಟ ಶ್ರೀನಿವಾಸ ಪೂಜಾರಿ, ಸರಕಾರದ ಅಡಿಪಾಯ ಕುಸಿಯುವ ಭೀತಿ ಅವರಲ್ಲಿದೆ. ಅಧಿಕಾರ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಸಿಎಂ, ಡಿಸಿಎಂ, ಸಚಿವರೆಲ್ಲರೂ ದೇವಸ್ಥಾನ ತಿರುಗಾಡುತ್ತಾರೆ ಎಂದು ವ್ಯಂಗ್ಯವಾಡಿದ್ದಾರೆ.
ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಮನೆಗೆ ದಾಳಿಯಾಗುತ್ತದೆ. ಆಳುವ ಪಕ್ಷದ ಗೂಂಡಾಗಳು ಅವರ ಮನೆಗೆ ನುಗ್ಗುತ್ತಾರೆ. ಇದು ಕಾನೂನು ವ್ಯವಸ್ಥೆ ಹದಗೆಟ್ಟಿದ್ದಕ್ಕೆ ಸಾಕ್ಷಿಯಾಗಿದೆ ಎಂದು ಕೋಟ ಶ್ರೀನಿವಾಸ ಪೂಜಾರಿ ಟೀಕೆ ಮಾಡಿದ್ದಾರೆ.
ರಾಜ್ಯದಲ್ಲಿನ ಮರಳು ಸಮಸ್ಯೆ ನಿವಾರಣೆಗೆ ಕ್ರಮಕೈಗೊಂಡಿಲ್ಲ. ಮನೆ ಮಂಜೂರಾದವರಿಗೆ ಮನೆ ಕಟ್ಟಲಾಗುತ್ತಿಲ್ಲ. ಸಿಎಂ ಮಾತನ್ನು ಉಡುಪಿ ಡಿಸಿ ಕೇಳದ ಪರಿಸ್ಥಿತಿಯಿದೆ. ಮೊದಲು ಉತ್ತಮ ಆಡಳಿತ ನೀಡಿ, ಬಳಿಕ ದೇವಸ್ಥಾನ ಸುತ್ತಿ ಎಂದು ಕುಂದಾಪುರದಲ್ಲಿ ಕೋಟ ವಾಗ್ದಾಳಿ ನಡೆಸಿದರು.