Publish Date: Wed, 15 Jul 2026 (13:28 IST)
Updated Date: Wed, 15 Jul 2026 (13:31 IST)
ಬೆಂಗಳೂರು: ಕಾಂಗ್ರೆಸ್ಗೆ ಮತ ಹಾಕುವವರಿಗೆ ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ನೀಡಿ ಅವರನ್ನು ಇಲ್ಲೇ ಶಾಶ್ವತವಾಗಿ ನೆಲೆಸುವಂತೆ ಮಾಡುವ ಹುನ್ನಾರ ಮಾಡುತ್ತಿದ್ದಾರೆ ಎಂದು ವಿಧಾನಸಭೆಯಲ್ಲಿನ ವಿರೋಧಪಕ್ಷದ ನಾಯಕ ಆರ್.ಅಶೋಕ್ ಅವರು ಆಕ್ಷೇಪಿಸಿದ್ದಾರೆ.
ಅವರು ಇಂದು ಇಲ್ಲಿ ಸುದ್ದಿಗಾರರ ಜೊತೆ ಮಾತನಾಡಿದರು. ಶಾಶ್ವತ ನಿವಾಸಿ ಪ್ರಮಾಣಪತ್ರ (ಪಿಆರ್ಸಿ) ಕೊಡದಂತೆ ತಡೆಯಲು ಕೋರಿ ಇವತ್ತು ಮಾನ್ಯ ರಾಜ್ಯಪಾಲರಿಗೆ ಮನವಿ ಕೊಡಲಾಗಿದೆ. 10 ವರ್ಷ ರಾಜ್ಯದಲ್ಲಿ ಇರುವವರಿಗೆ ಪಿಆರ್ಸಿ ನೀಡುವ ಮೂಲಕ ಅವರು ಈ ರಾಜ್ಯದ ಶಾಶ್ವತ ಪ್ರಜೆ ಎಂಬಂತೆ ಬಿಂಬಿಸಿ ರೇಷನ್ ಕಾರ್ಡ್, ಆರೋಗ್ಯ ಕಾರ್ಡ್, ಮನೆ ಮತ್ತಿತರ ಸೌಕರ್ಯಗಳನ್ನು ನೀಡಲು ವ್ಯವಸ್ಥೆ ಮಾಡುತ್ತಿದ್ದಾರೆ ಎಂದು ಟೀಕಿಸಿದರು.
ಪಿಎಫ್ಐ, ಕೆಎಫ್ಡಿ ಉಪಟಳ ರಾಜ್ಯದಲ್ಲಿ ಜಾಸ್ತಿಯಾಗಿದೆ. ಅವರ ಮೇಲಿದ್ದ ಕೇಸುಗಳನ್ನು ಕಾಂಗ್ರೆಸ್ಸಿನವರು ವಾಪಸ್ ಪಡೆಯುತ್ತಿದ್ದಾರೆ. ಈಗ ಬಾಂಗ್ಲಾದೇಶದವರು ಕರ್ನಾಟಕದಲ್ಲಿ 25ರಿಂದ 30 ಲಕ್ಷ ಜನರು ಇರುವ ಮಾಹಿತಿ ಇದೆ. ಈಗ ಎಸ್ಐಆರ್ ನಡೆಯುತ್ತಿದೆ. ಅದಕ್ಕೆ ವಿರುದ್ಧವಾಗಿ ಇವರು ಪಿಆರ್ಸಿ ಕೊಡುವುದು ಸರಿಯಲ್ಲ; ಕೇಂದ್ರ ಸರಕಾರಕ್ಕೆ ಮಾತ್ರ ಇಂಥ ಪ್ರಮಾಣಪತ್ರ ಕೊಡಲು ಅಧಿಕಾರ ಇದೆ ಎಂದು ಗಮನ ಸೆಳೆದರು.
ಜಿಬಿಎ, ಜಿಲ್ಲಾ ಪಂಚಾಯಿತಿ ಸೇರಿದಂತೆ ವಿವಿಧ ಚುನಾವಣೆಗೆ ಮತದಾರರನ್ನು ಉಳಿಸಿಕೊಳ್ಳಲು ಅಕ್ರಮವಾಗಿ, ದೇಶದ್ರೋಹಿ ಕ್ರಮ ಕೈಗೊಳ್ಳುತ್ತಿದ್ದಾರೆ. ಈ ಸಂಬಂಧ ಸರಕಾರಕ್ಕೆ ಎಚ್ಚರಿಕೆ ಕೊಡುವುದಾಗಿ ಗೌರವಾನ್ವಿತ ರಾಜ್ಯಪಾಲರು ತಿಳಿಸಿದ್ದಾರೆ ಎಂದು ವಿವರಿಸಿದರು.
11 ಜನರು ಕಾಲ್ತುಳಿತದಲ್ಲಿ ಸಾವನ್ನಪ್ಪಿದ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಈ ದುರ್ಘಟನೆಗೆ ಸರಕಾರವೇ ನೇರ ಕಾರಣ ಎಂದು ವಿಧಾನಸಭೆಯಲ್ಲಿ ನಾವು ತಿಳಿಸಿದ್ದೆವು. ಈಗ ವರದಿಯಲ್ಲೇ ಕ್ಲೀನ್ ಚಿಟ್ ಕೊಟ್ಟಿದ್ದಾರೆ. ಅವತ್ತು ಕಮಿಷನರ್, ಪೊಲೀಸ್ ಅಧಿಕಾರಿಗಳನ್ನು ಅಮಾನತು ಮಾಡಿದ್ದರು. ಹೆಂಡತಿ, ಮಕ್ಕಳ, ಮೊಮ್ಮಕ್ಕಳ ಜೊತೆ ವೇದಿಕೆಯಲ್ಲಿ ಇದ್ದವರ ಮೇಲೆ ಕ್ರಮ ಆಗಬೇಕಿತ್ತು. ಅವರ ಮೇಲೆ ಕೇಸೇ ಮಾಡಿಲ್ಲ ಎಂದು ಆಕ್ಷೇಪಿಸಿದರು. ಇದೀಗ ಅಧಿಕಾರಿಗಳು ನಿರಪರಾಧಿಗಳಾದರೆ ಅಪರಾಧಿಗಳು ಯಾರು? ಈ ಯುವಜನರ ಸಾವಿಗೆ ನ್ಯಾಯ ಎಲ್ಲಿದೆ? ಎಂದು ಕೇಳಿದರು. ಈ ಪ್ರಕರಣ ಮುಚ್ಚಿ ಹಾಕುವ ಕೆಲಸವನ್ನು ಮಾಡಿದ್ದಾರೆ. ಇದು ಅಕ್ಷಮ್ಯ ಎಂದು ಆರೋಪಿಸಿದರು. ಮುಂದೆ ನಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಈ ಪ್ರಕರಣವನ್ನು ಸಿಬಿಐ ತನಿಖೆಗೆ ಕೊಡುತ್ತೇವೆ ಎಂದು ತಿಳಿಸಿದರು.
ಎಸ್ಡಿಆರ್ಎಫ್ ಹಣ ಈಗಾಗಲೇ ಬಂದಿದೆ. ಅದನ್ನೇನು ಮಾಡಿದ್ದೀರಿ ಎಂದು ಇನ್ನೊಂದು ಪ್ರಶ್ನೆಗೆ ಮರುಪ್ರಶ್ನೆ ಹಾಕಿದ ಅವರು, ಎನ್ಡಿಆರ್ಎಫ್ ಹಣ ಬರಲು ಬರಪೀಡಿತ ಪ್ರದೇಶ ಎಂದು ಘೋಷಿಸಬೇಕು. ಬರಪೀಡಿತ ಎಂದು ಘೋಷಿಸಿ ರಾಜ್ಯ ಸರಕಾರ ಹಣ ಬಿಡುಗಡೆ ಮಾಡಬೇಕು. ಬೆಳೆ ಹಾನಿ, ಕುಡಿಯುವ ನೀರಿನ ಸಮಸ್ಯೆ, ಮೇವಿನ ಸಮಸ್ಯೆ ಬಗ್ಗೆ ವರದಿ ಕೊಟ್ಟಿಲ್ಲ. ಪತ್ರ ಬರೆದಿದ್ದೇಕೆ? ನೀವು ಪಾಪರ್ ಆಗಿದ್ದೀರಾ? ಖಜಾನೆ ಖಾಲಿ ಆಗಿದೆಯೇ? ಎಂದು ಕೇಳಿದರು.
ತಮಿಳುನಾಡಿಗೆ ಕದ್ದು ಮುಚ್ಚಿ ನೀರು ಬಿಡುತ್ತಿದ್ದಾರೆ. ಕೇಂದ್ರ ಸರಕಾರದ ಮೇಲೆ ಗೂಬೆ ಕೂರಿಸಲು ಪತ್ರ ಬರೆಯುತ್ತೀರಾ? ಇದು ಬಹಳ ದಿನ ನಡೆಯುವುದಿಲ್ಲ ಎಂದು ಎಚ್ಚರಿಸಿದರು. ರಾಜ್ಯ ಸರಕಾರವು ಕೂಡಲೇ ರೈತರ ನೆರವಿಗೆ ಧಾವಿಸಬೇಕು. ಬರ ಎಂದು ಪ್ರಕಟಿಸಿ, ಕುಡಿಯುವ ನೀರು, ಜಾನುವಾರುಗಳಿಗೆ ಸಂಬಂಧಿಸಿ ಹಣ ಕೊಡಬೇಕೆಂದು ಆಗ್ರಹಿಸಿದರು.
ಯಾವ್ಯಾವ ಸಚಿವರು ಮನೆ ನವೀಕರಣಕ್ಕೆ ಎಷ್ಟೆಷ್ಟು ಖರ್ಚು ಮಾಡಿದ್ದಾರೆಂದು ಕೇಳಿ ಸರಕಾರಕ್ಕೆ ಪತ್ರ ಬರೆದು ಒಂದು ತಿಂಗಳಾಗಿದೆ. ಗ್ಯಾರಂಟಿ ಸಮಿತಿ ರಾಜ್ಯ ಅಧ್ಯಕ್ಷ, ಉಪಾಧ್ಯಕ್ಷರಿಗೆ ಕೊಟ್ಟ ಭತ್ಯೆ ಕುರಿತಂತೆ ಕೇಳಿದ್ದು, ಉತ್ತರ ಸಿಕ್ಕಿಲ್ಲ ಎಂದು ದೂರಿದರು. ಈ ಸರಕಾರ ಯಾವ ಪತ್ರಕ್ಕೂ ಉತ್ತರ ಕೊಡುತ್ತಿಲ್ಲ ಎಂದು ಟೀಕಿಸಿದರು. ಲೂಟಿ ಮಾಡುತ್ತಾರೆ. ವಿವರ ಕೇಳಿದರೆ ಉತ್ತರವೇ ನೀಡುವುದಿಲ್ಲ ಎಂದು ಆಕ್ಷೇಪಿಸಿದರು.
About Writer
ಕೃಷ್ಣವೇಣಿ ಕೆ
Completed bachelor degree in Journalism and communication in SDMC Ujire. 15 years of experience as journalist. Worked as sub editor and reporter. Specialties in sports, politics and entertainment.....
ಮತ್ತಷ್ಟು ಓದಿ