Publish Date: Wed, 30 Mar 2022 (19:17 IST)
Updated Date: Wed, 30 Mar 2022 (19:18 IST)
ತ್ರಿವಿಧ ದಾಸೋಹಿ, ನಡೆದಾಡುವ ದೇವರು ಎಂದೇ ಖ್ಯಾತರಾಗಿರುವ ಸಿದ್ದಗಂಗಾ ಶ್ರೀಗಳ ಕುರಿತಾಗಿ ಸಿನಿ ಸೀರಿಸ್ ಸಿದ್ಧವಾಗುತ್ತಿದೆ. 52 ಕಂತುಗಳ ಮೆಗಾ ಸೀರಿಸ್ ಇದಾಗಿದ್ದು, ಹಂಸಲೇಖ ಅವರ ಸಾರಥ್ಯದಲ್ಲಿ ಮೂಡಿ ಬರಲಿದೆ. ಸಿದ್ದಗಂಗಾ ಶ್ರೀಗಳ 115ನೇ ಜಯಂತೋತ್ಸವದ ಪ್ರಯುಕ್ತ ಈ ಸೀರಿಸ್ ಸಿದ್ಧವಾಗುತ್ತಿದ್ದು, ಶ್ರೀಗಳ ಪಾತ್ರಕ್ಕಾಗಿ ಅಮಿತಾಭ್ ಬಚ್ಚನ್ ಅವರನ್ನು ಕೇಳಲಾಗಿದೆಯಂತೆ. ಆದರೆ ಇನ್ನೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಸಂಗೀತ ಬ್ರಹ್ಮ ಹಂಸಲೇಖ ತಿಳಿಸಿದ್ದಾರೆ. ಶ್ರೀಗಳ ಜೀವನ ಚರಿತ್ರೆಯನ್ನು ಸಾರುವ ಸೀರಿಸ್ ಇದಾಗಿದ್ದರಿಂದ ದೊಡ್ಡ ಮಟ್ಟದಲ್ಲೇ ನಿರ್ಮಾಣ ಮಾಡುವ ಯೋಜನೆ ತಂಡದ್ದು. ಹಾಗಾಗಿ ಅಮಿತಾಭ್ ಬಚ್ಚನ್ ಅವರನ್ನು ನಿರ್ಮಾಣ ತಂಡ ಈಗಾಗಲೇ ಸಂಪರ್ಕ ಮಾಡಿದೆ. ಅಮಿತಾಭ್ ಅವರ ಆರೋಗ್ಯದಲ್ಲಿ ಏರುಪೇರಾಗಿರುವ ಕಾರಣದಿಂದಾಗಿ ಅವರ ಗ್ರೀನ್ ಸಿಗ್ನಲ್ ಗೆ ತಂಡ ಕಾಯುತ್ತಿದೆ.