Publish Date: Wed, 20 Feb 2019 (17:03 IST)
Updated Date: Wed, 20 Feb 2019 (17:04 IST)
ಸೈಟ್ ಆಸೆಗಾಗಿ ನಾದಿನಿಯನ್ನೇ ಕೊಲೆ ಮಾಡಿದ ಆರೋಪಿಗಳನ್ನು ಬಂಧನ ಮಾಡಲಾಗಿದೆ.
ನಿವೇಶನದ ಆಸೆಗಾಗಿ ಬೆಂಗಳೂರಿನ ಬಿಹೆಚ್ಇಎಲ್ನಲ್ಲಿ ಉದ್ಯೋಗಿಯಾಗಿದ್ದ ಅನುಷಾ ಅವರನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆಗೈದ ಆಕೆಯ ಭಾವ ಸೇರಿ ಇಬ್ಬರನ್ನು ಬಂಧಿಸುವಲ್ಲಿ ಕೆಂಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಕೆಂಗೇರಿಯ ಸನ್ಸಿಟಿಯ ವಿವೇಕ್ ಪ್ರತಾಪ್ ಅಗರ್ವಾಲ್, ಕೆಂಗೇರಿಯ ಗೇರ್ಪಾಳ್ಯದ ಥಾಯ್ಹೇಲ್ ಬಂಧಿತರು. ಫೆ.15 ರಂದು ಸನ್ಸಿಟಿಯ ಮನೆಯಲ್ಲಿದ್ದ ಅನುಷಾ ಅವರನ್ನು ಹಗ್ಗದಿಂದ ಕುತ್ತಿಗೆ ಬಿಗಿದು ಕೊಲೆ ಮಾಡಿ ಪರಾರಿಯಾಗಿದ್ದ.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಕೆಂಗೇರಿ ಪೊಲೀಸರು ತನಿಖೆ ಕೈಗೊಂಡಾಗ ಆರೋಪಿ ವಿವೇಕ್ ಪ್ರತಾಪ್ ಅಗರ್ವಾಲ್, ಕೊಲ್ಕತ ಮೂಲದವನಾಗಿದ್ದು, ಕೊಲೆಯಾದ ಅನುಷಾ ಅವರ ಅಕ್ಕ ನೇತ್ರಾವತಿ ಅವರನ್ನು ವಿವಾಹವಾಗಿದ್ದ ಎಂಬುದು ತಿಳಿದು ಬಂದಿದೆ.
ಆರ್ಥಿಕವಾಗಿ ನಷ್ಟಕ್ಕೆ ಒಳಗಾಗಿದ್ದ ಆರೋಪಿ ಅನುಷಾರನ್ನು ಕೊಲೆ ಮಾಡಿದರೆ ಸೈಟ್ ಸಿಗುತ್ತದೆ ಎಂಬ ದುರಾಸೆಯಲ್ಲಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.