Publish Date: Fri, 05 Jul 2024 (09:54 IST)
Updated Date: Fri, 05 Jul 2024 (09:57 IST)
ಬೆಂಗಳೂರು: ಇತ್ತೀಚೆಗೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಜೈಲು ಸೇರಿರುವ ಮಕ್ಕಳನ್ನು ನೋಡಲು ಭವಾನಿ ರೇವಣ್ಣ ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದರು. ಭವಾನಿ ರೇವಣ್ಣ ಕಾರಿನಲ್ಲಿ ಹೋಗುವ ದೃಶ್ಯ ನೋಡಿ ನೆಟ್ಟಿಗರು ಒಂದು ಕೋಟಿ ರೂ. ಕಾರಿನ ದೌಲತ್ತು ಎಲ್ಲಿ ಹೋಯ್ತು ಎಂದು ಪ್ರಶ್ನೆ ಮಾಡಿದ್ದಾರೆ.
ಭವಾನಿ ರೇವಣ್ಣ ಮೊನ್ನೆಯಷ್ಟೇ ಪುತ್ರ ಪ್ರಜ್ವಲ್ ಮತ್ತು ಸೂರಜ್ ರನ್ನು ನೋಡಲು ಜೈಲಿಗೆ ಹೋಗಿದ್ದರು. ಪ್ರಜ್ವಲ್ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಲುಕಿಕೊಂಡಿದ್ದರೆ ಇತ್ತ ಸೂರಜ್ ಯುವಕನ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿದ ಆರೋಪಕ್ಕೊಳಗಾಗಿದ್ದಾರೆ.
ಇಬ್ಬರನ್ನೂ ನೋಡಲು ಭವಾನಿ ರೇವಣ್ಣ ಕಾರಿನಲ್ಲಿ ಬಂದಾಗ ಮಾಧ್ಯಮಗಳ ಕ್ಯಾಮರಾ ಕಣ್ಣುಗಳನ್ನು ಅವರನ್ನು ಸೆರೆ ಹಿಡಿದಿದ್ದವು. ಆದರೆ ಮಾಧ್ಯಮಗಳ ಕಣ್ಣಿನಿಂದ ತಪ್ಪಿಸಿಕೊಳ್ಳಲು ಭವಾನಿ ರೇವಣ್ಣ ಮುಖ ಮುಚ್ಚಿ ಕೂತಿದ್ದರು. ಈ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು.
ಇದನ್ನು ನೋಡಿ ನೆಟ್ಟಿಗರು ಒಂದು ಕೋಟಿ ಕಾರಿನ ದೌಲತ್ತು ಈಗ ಇಲ್ವಾ? ಎಂದು ಪ್ರಶ್ನೆ ಮಾಡಿದ್ದಾರೆ. ಕೆಲವು ತಿಂಗಳುಗಳ ಹಿಂದೆ ಭವಾನಿ ರೇವಣ್ಣ ತಮ್ಮ ಕಾರಿಗೆ ವ್ಯಕ್ತಿಯೊಬ್ಬನ ಬೈಕ್ ಗುದ್ದಿದ್ದಕ್ಕೆ ಆತನಿಗೆ ಈ ಕಾರಿಗೆ 1 ಕೋಟಿ ರೂ. ಕೊಟ್ಟಿದ್ದೇನೆ. ಸಾಯಲು ನನ್ನ ಕಾರೇ ಬೇಕಾಗಿತ್ತಾ ಎಂದು ಆವಾಜ್ ಹಾಕಿದ್ದರು. ಈ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆಗ ಭವಾನಿ ರೇವಣ್ಣ ವಿರುದ್ಧ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಈಗ ಇಡೀ ಕುಟುಂಬವೇ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಸಿಕ್ಕು ನರಳಾಡುತ್ತಿದೆ. ಇತ್ತ ಭವಾನಿ ರೇವಣ್ಣ ಕೂಡಾ ಮಂಡಿ ನೋವಿನಿಂದ ಬಳಲುತ್ತಿದ್ದಾರೆ. ಹೀಗಾಗಿ ನೆಟ್ಟಿಗರು ಅವರನ್ನು ಹಳೆಯ ಘಟನೆ ನೆನಪಿಸಿ ಪ್ರಶ್ನೆ ಮಾಡಿದ್ದಾರೆ.