Publish Date: Sat, 01 Jun 2024 (09:44 IST)
Updated Date: Sat, 01 Jun 2024 (09:46 IST)
ಬೆಂಗಳೂರು: ಮಹಿಳೆಯ ಅಪಹರಣ ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಭವಾನಿ ರೇವಣ್ಣ ಈಗ ತಮಗೆ ಕ್ಯಾನ್ಸರ್ ಕಾಯಿಲೆ ಇದೆ. ಹೀಗಾಗಿ ನಿರೀಕ್ಷಣಾ ಜಾಮೀನು ನೀಡಿ ಎಂದು ವಕೀಲರ ಮೂಲಕ ಕೋರ್ಟ್ ಗೆ ಮನವಿ ಮಾಡಿದ್ದರು.
ಮಹಿಳೆಯ ಅಪಹರಣ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗುವಂತೆ ಎರಡೆರಡು ಬಾರಿ ನೋಟಿಸ್ ನೀಡಿದರೂ ಭವಾನಿ ರೇವಣ್ಣ ಹಾಜರಾಗಿರಲಿಲ್ಲ. ಅವರ ಜಾಮೀನು ಅರ್ಜಿಯೂ ಮೊನ್ನೆ ತಿರಸ್ಕೃತವಾಗಿತ್ತು. ಇತ್ತ ಪುತ್ರ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಕೇಸ್ ನಲ್ಲಿ ಅರೆಸ್ಟ್ ಆಗಿದ್ದಾರೆ. ಹೀಗಿದ್ದರೂ ಭವಾನಿ ರೇವಣ್ಣ ಎಲ್ಲಿದ್ದಾರೆ ಎಂಬುದು ನಿಗೂಢವಾಗಿಯೇ ಇತ್ತು.
ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದ ಭವಾನಿ ರೇವಣ್ಣ ಪರ ಅವರ ವಕೀಲರು ಅವರಿಗೆ ಕ್ಯಾನ್ಸರ್ ಕಾಯಿಲೆ ಇದೆ. ಹೀಗಾಗಿ ಆರೋಗ್ಯದ ದೃಷ್ಟಿಯಿಂದ ನಿರೀಕ್ಷಣಾ ಜಾಮೀನು ನೀಡಿ ಎಂದು ಕೋರ್ಟ್ ಮುಂದೆ ವಾದ ಮಂಡಿಸಿದ್ದರು. ಆದರೆ ಕೋರ್ಟ್ ಜಾಮೀನು ನಿರಾಕರಿಸಿತ್ತು.
ಈ ನಡುವೆ ಇಂದು ಬೆಳಿಗ್ಗೆ 10 ಗಂಟೆಯ ಬಳಿಕ ಭವಾನಿಗೆ ಮನೆಯಲ್ಲಿಯೇ ಇರಲು ಸೂಚಿಸಿರುವ ಎಸ್ಐಟಿ ತಂಡ ಅಲ್ಲಿಯೇ ವಿಚಾರಣೆ ನಡೆಸುವುದಾಗಿ ಹೇಳಿದೆ. ಈ ವೇಳೆ ಅವರು ಬಂಧನಕ್ಕೊಳಗಾಗುವ ಸಾಧ್ಯತೆಯೂ ಇದೆ.