Publish Date: Mon, 27 Mar 2023 (14:07 IST)
Updated Date: Mon, 27 Mar 2023 (14:08 IST)
ತುಮಕೂರು : ರಾಜಕಾರಣದಲ್ಲಿ ಜಾತಿ ಮತ್ತು ದುಡ್ಡಿನ ಬಲವೇ ಪ್ರಮುಖ ಪಾತ್ರ ವಹಿಸುತ್ತದೆ. ಅಭಿವೃದ್ಧಿ ನೋಡಿ ಮತ ಹಾಕುವ ಆದ್ಯತೆಯ ಪ್ರಮಾಣ ಕಡಿಮೆ. ಪ್ರಬಲ ಜಾತಿಯ ಮತಗಳೇ ನಿರ್ಣಾಯಕವಾಗಿ, ಕ್ಷೇತ್ರದಿಂದ ಸ್ಪರ್ಧಿಸಿದ ಪ್ರಬಲ ಸಮುದಾಯದ ಅಭ್ಯರ್ಥಿಯೇ ಗೆಲ್ಲೋದು ಹೆಚ್ಚು.
ಅಪರೂಪಕ್ಕೆ ಎಂಬಂತೆ ಜಾತಿ ಪ್ರಾಬಲ್ಯ ಇಲ್ಲದೇ ಇದ್ದರೂ ಗೆದ್ದು ಸಚಿವ ಸ್ಥಾನ ಅಲಂಕರಿಸಿದವರೂ ಇದ್ದಾರೆ. ಸಮುದಾಯದ ಮತ ನಂಬದೇ ಸರಳತೆ, ಕ್ಷೇತ್ರದ ಜನರೊಂದಿಗಿನ ಆಪ್ತತೆ ಹಾಗೂ ಅಭಿವೃದ್ಧಿ ಕೆಲಸದ ಮೂಲಕ ತಿಪಟೂರು ಶಾಸಕ, ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಬಿಜೆಪಿಯಿಂದ ಎರಡು ಬಾರಿ ಗೆದ್ದು ಸಚಿವರಾಗಿದ್ದಾರೆ.
ಸಚಿವ ಬಿ.ಸಿ.ನಾಗೇಶ್ ಬ್ರಾಹ್ಮಣ ಸಮುದಾಯದವರು. ತಿಪಟೂರು ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದ ಪ್ರಾಬಲ್ಯ ಇದೆ. ಸರಿಸುಮಾರು 68 ಸಾವಿರ ನೊಳಂಬ ಲಿಂಗಾಯತರ ಮತಗಳಿವೆ. ಬ್ರಾಹ್ಮಣ ಸಮುದಾಯದ ಮತ ಕೇವಲ 5-8 ಸಾವಿರದ ಆಸುಪಾಸು. ಆದರೂ ಲಿಂಗಾಯತ ಸಮುದಾಯದ ಕಾಂಗ್ರೆಸ್ ಮಾಜಿ ಶಾಸಕ ಕೆ.ಷಡಕ್ಷರಿ ಅವರನ್ನು ಪರಾಭವಗೊಳಿಸಿ ಬಿ.ಸಿ.ನಾಗೇಶ್ ಎರಡು ಬಾರಿ ಶಾಸಕರಾಗಿ ಸಚಿವರಾಗಿದ್ದಾರೆ.