Publish Date: Fri, 16 Jul 2021 (21:35 IST)
Updated Date: Fri, 16 Jul 2021 (22:01 IST)
ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳು ಯಾವುದೇ ಉದ್ಯೋಗ ವಿಲ್ಲದೆ ನಿರಾಶ್ರಿತರಾಗಿದ್ದು, ಅವರ ಜೀವನೋಪಾಯಕ್ಕಾಗಿ ನಗರದಲ್ಲಿ ಹಾಲಿನ ಬೂತ್, ಹಾಪ್ ಕಾಮ್ಸ್ ಸೇರಿದಂತೆ ಮತ್ತಿತರ ವ್ಯವಸ್ಥೆಯನ್ನು ಖಾಯಂ ವೃತ್ತಿಪರ ವ್ಯವಸ್ಥೆ ಮಾಡಿಕೊಡುವ ಸಲುವಾಗಿ ಪಾಲಿಸಿ ರಚಿಸುವಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಡಾ. ಪಿ.ಪಿ.ವಾವ ರವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಸಫಾಯಿ ಕರ್ಮಚಾರಿಗಳಿಗೆ ಸಂಬಂಧಿಸಿದಂತೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯರು ಡಾ. ಪಿ.ಪಿ.ವಾವ ಶುಕ್ರವಾರ ಹೊಸ ಕುಮಾರ ಕೃಪಾ ಅತಿಥಿಗೃಹ ಸಭಾ ಕೊಠಡಿಯಲ್ಲಿ ಸಭೆ ನಡೆಸಿದರು. ಈ ವೇಳೆ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಮಾಜಿ ಸದಸ್ಯ ಜಗದೀಶ್ ಹಿರೇಮನಿ,ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ, ವಿಶೇಷ ಆಯುಕ್ತ ಹರೀಶ್ ಕುಮಾರ್, ರವೀಂದ್ರ, ಜಂಟಿ ಆಯುಕ್ತ(ಘನತ್ಯಾಜ್ಯ) ಸರ್ಫರಾಜ್ ಖಾನ್, ಅಧೀಕ್ಷಕ ಇಂಜಿನಿಯರ್(ಘನತ್ಯಾಜ್ಯ) ಬಸವರಾಜ್ ಕಬಾಡೆ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.
ಸಭೆಯನ್ನು ಉದ್ದೇಶಿಸಿ ಮಾತನಾಡಿದ ರಾಷ್ಟ್ರೀಯ ಸಫಾಯಿ ಕರ್ಮಚಾರಿ ಆಯೋಗದ ಸದಸ್ಯ ಡಾ. ಪಿ.ಪಿ.ವಾವ ಮ್ಯಾನ್ಯುಯಲ್ ಸ್ಕ್ಯಾವೆಂಜರ್ಸ್ ಗಳು ಒಳಚರಂಡಿ/ಮಲವಿಸರ್ಜನೆ ಗುಂಡಿಗಳಲ್ಲಿ ಇಳಿಯಬಾರದೆಂದು ಕೇಂದ್ರ ಸರ್ಕಾರ ನಿಷೇಧವೇರಿದೆ. ಈ ಸಂಬಂಧ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳಾಗಿ ಜೀವನ ನಡೆಸುತ್ತಿದ್ದವರ ಜೀವನೋಪಾಯಕ್ಕಾಗಿ ಸರ್ಕಾರದ ವತಿಯಿಂದ ಏನಾದರು ವ್ಯವಸ್ಥೆ ಮಾಡಬೇಕು. ಈ ಸಂಬಂಧ ಹಾಲಿನ ಬೂತ್, ಹಾಪ್ ಕಾಮ್ಸ್ ಸೇರಿದಂತೆ ಇನ್ನಿತರೆ ವ್ಯವಸ್ಥೆ ಮಾಡಿದಲ್ಲಿ ಅಂಥವರ ಜೀವನೋಪಾಯ ಸುಗಮವಾಗಲಿದೆ. ಆದ್ದರಿಂದ ಅದಕ್ಕಾಗಿ ಪಾಲಿಸಿ ರಚಿಸಿ ಮ್ಯಾನುಯಲ್ ಸ್ಕ್ಯಾವೆಂಜರ್ಸ್ ಗಳಿಗೆ ಅನುಕೂಲವಾಗುವಂತಹ ಕೆಲಸವಾಗಬೇಕು ಎಂದರು.
ಪಾಲಿಕೆ ಮುಖ್ಯ ಆಯುಕ್ತ ಗೌರವ್ ಗುಪ್ತ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಸುಮಾರು 17,000 ನೇರ ವೇತನದಡಿ ಪೌರಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದು, ಖಾಯಂ ಪೌರಕಾರ್ಮಿಕರನ್ನು ಹೊರತು ಪಡಿಸಿ ಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರಿಗೆ ಪಾಲಿಕೆಯಿಂದ ನೇರ ವೇತನ ವ್ಯವಸ್ಥೆಯಡಿ ತಿಂಗಳ 7ನೇ ತಾರೀಖಿನ ವೇಳೆಗೆ ವೇತನವನ್ನು ನೀಡಲಾಗುತ್ತಿದೆ. ಅಲ್ಲದೆ ಎಲ್ಲಾ ಪೌರಕಾರ್ಮಿಕರಿಗೂ ಒಂದೇ ರೀತಿಯ ಸಮವಸ್ತ್ರವನ್ನು ನೀಡಲಾಗಿದ್ದು, ಸುರಕ್ಷಾ ಸಾಮಗ್ರಿಗಳನ್ನು ನೀಡಲಾಗುತ್ತದೆ. ಜೊತೆಗೆ ಪೌರಕಾರ್ಮಿಕರ ಕಾಲೋನಿಗಳಲ್ಲಿ ಆಗಿಂದಾಗ್ಗೆ ಸೋಂಕುನಿವಾರಕ ಸಿಂಪಡಣೆ ಹಾಗೂ ಮೂರು ತಿಂಗಳಿಗೊಮ್ಮೆ ಹೆಲ್ತ್ ಕ್ಯಾಂಪ್ ಮಾಡಲಾಗುವುದು. ಪಾಲಿಕೆ ವ್ಯಾಪ್ತಿಯಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರಕಾರ್ಮಿಕರು ಕೆಲಸದ ಅವಧಿಯಲ್ಲಿ ಮೃತಪಟ್ಟವರೆ ಅವಲಂಬಿತರಿಗೆ 10 ಲಕ್ಷ ಪರಿಹಾರವನ್ನು ನೀಡಲಾಗುತ್ತದೆ ಎಂದರು.