Publish Date: Sun, 31 Aug 2025 (17:19 IST)
Updated Date: Sun, 31 Aug 2025 (17:22 IST)
ಕಲಬುರಗಿ: ಡಿಸಿಎಂ ಡಿಕೆ ಶಿವಕುಮಾರ್ ಅವರು ಒಂದು ಕಾಲನ್ನು ಬಿಜೆಪಿಯಲ್ಲಿಟ್ಟಿದ್ದು, ಈ ವಿಚಾರವಾಗಿ ಅವರು ಬಿಜೆಪಿ ಜತೆ ಚರ್ಚೆ ಮಾಡಿದ್ದಾರೆಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೊಸ ಬಾಂಬ್ ಸಿಡಿಸಿದ್ದಾರೆ.
ಕಲಬುರಗಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಿಕೆ ಶಿವಕುಮಾರ್ ಅವರು ಬಿಜೆಪಿ ಜತೆ ಸೇರಿ ಸರ್ಕಾರ ಮಾಡಲು ವಿಜಯೇಂದ್ರ ಜತೆ ದೆಹಲಿಯಲ್ಲಿ ಚರ್ಚೆ ನಡೆಸಿದ್ದಾರೆ. 60 ರಿಂದ 70 ಕಾಂಗ್ರೆಸ್ ಶಾಸಕರನ್ನ ಕರೆತಂದು ನಮಸ್ತೆ ಸದಾ ವತ್ಸಲೇ ಹಾಡ್ತೀವಿ ಅಂತಾ ಹೇಳಿದ್ದಾರೆ. ಈ ಮೂಲಕ ಡಿಕೆಶಿ ಬಿಜೆಪಿ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದರು. ಆದರೆ ನಮ್ಮ ಆಂತರಿಕ ವರದಿಯಲ್ಲಿ ಡಿಕೆ ಶಿವಕುಮಾರ್ಗೆ ಶಾಸಕರ ಬೆಂಬಲವಿಲ್ಲದ ಕಾರಣ ಸರ್ಕಾರ ಮಾಡಲು ಪ್ರಯತ್ನಿಸಿಲ್ಲ ಅಂತಾ ಬಿಜೆಪಿ ಹೈಕಮಾಂಡ್ ಹೇಳಿತ್ತು.
ವಿಜಯೇಂದ್ರ ಹಾಗೂ ಡಿಕೆಶಿ ಇವರಿಬ್ಬರು ಕುಳಿತುಬಿಟ್ಟಿದ್ದರೆ ಕರ್ನಾಟಕವನ್ನ ಮಾರಾಟ ಮಾಡುತ್ತಿದ್ದರು. ಹೀಗಾಗಿ ಡಿಕೆಶಿ ಬೇಡ ಅಂತಾ ನಮ್ಮವರು ಅಂದಿದ್ರು ಎಂದು ಹೇಳಿದ್ದಾರೆ.
ಡಿಕೆಶಿ ಪಾಪ ನಮಸ್ತೆ ಸದಾ ವತ್ಸಲ್ಯ ಅಂತಾ ಹೇಳಿದ್ರು ನಮಸ್ತೆ ಸೋನಿಯಾ ಮಾತೆ ಇಟ್ಲಿ ಕಾ ಪುತ್ರ ಅಂತಾ ಹಾಡಿದ್ರೆ, ಸಿದ್ದರಾಮಯ್ಯ ಅವರನ್ನು ಸಿಎಂ ಸ್ಥಾನದಿಂದ ತೆಗೆದು ಸೋನಿಯಾ ಗಾಂಧಿ ಡಿಕೆಶಿಯನ್ನ ಸಿಎಂ ಮಾಡುತ್ತಿದ್ದರು.
ಭಾರತ ಮಾತೆಗೆ ನಮಸ್ತೆ ಅಂದ್ರೆ ಇವರಿಗೆ ನೋವಾಗುತ್ತದೆ. ಇಟ್ಲಿ ಮಾತೆಗೆ ಒಂದು ಹಾಡು ಕಟ್ಟಿ ಹಾಡಬೇಕು. ಸೋನಿಯಾ ಮಾತೆ ಅಂತಾ ಹಾಡಿದ್ರೆ ಡಿಕೆಶಿ 24 ಗಂಟೆಯಲ್ಲಿ ಸಿಎಂ ಆಗುತ್ತಾರೆ ಎಂದು ಟಾಂಗ್ ಕೊಟ್ರು.