Publish Date: Wed, 25 Sep 2019 (18:51 IST)
Updated Date: Wed, 25 Sep 2019 (18:56 IST)
ನಾಲ್ಕು ವರ್ಷದ ಹಿಂದೆ ಬ್ಯಾಂಕ್ ವೊಂದಕ್ಕೆ ಕನ್ನ ಹಾಕಿ ಕೋಟಿ ಕೋಟಿ ಲೂಟಿ ಮಾಡಿದ್ದ ಘಟನೆ ಮಾಸುವ ಮುನ್ನವೇ ಮತ್ತೆ ಅದೇ ಬ್ಯಾಂಕಿನಲ್ಲಿ ಭಾರೀ ಪ್ರಮಾಣದ ಕಳ್ಳತನ ನಡೆದಿದೆ.
ಹೊನ್ನಾಳಿ - ಶಿವಮೊಗ್ಗ ರಸ್ತೆಯ ಅರಕೆರೆಯ ಕರ್ನಾಟಕ ಬ್ಯಾಂಕ್ ಶಾಖೆಗೆ ಕನ್ನ ಹಾಕಿದ್ದ ಕಳ್ಳರು, ಇದೀಗ ಮತ್ತೆ ಅದೇ ಮಾದರಿಯಲ್ಲಿ ಗೋಡೆ ಕೊರೆದು ದರೋಡೆ ಮಾಡಿದ್ದಾರೆ. ಬ್ಯಾಂಕ್ ಹಿಂಬಂದಿಯ ಗೋಡೆ ಕೊರೆದು ಚಿನ್ನಾಭರಣ ಸಹಿತ ನಗದು ಹಣವನ್ನು ದೋಚಿದ್ದಾರೆ.
ಕಳೆದ ನಾಲ್ಕು ವರ್ಷದ ಹಿಂದೆ ದಾವಣಗೆರೆ ಜಿಲ್ಲೆ ಜನರನ್ನೇ ಈ ಪ್ರಕರಣ ಬೆಚ್ಚಿ ಬೀಳಿಸಿತ್ತು. ಇದೀಗ ಮತ್ತೆ ದರೋಡೆಕೋರರು ಅದೇ ಬ್ಯಾಂಕ್ ನ ಗೋಡೆ ಕೊರೆದು ದರೋಡೆ ಮಾಡಿದ್ದಾರೆ. ಈ ಹಿಂದೆ 4 ಕೋಟಿಯ ಚಿನ್ನಾಭರಣ, ನಗದು ಕಳ್ಳತನವಾಗಿತ್ತು. ಆ ದುರಂತ ಇನ್ನು ಮಾಸುವ ಮುನ್ನವೇ ಮತ್ತೇ ಕಳ್ಳರು ಅದೇ ಬ್ಯಾಂಕಿಗೆ ಕನ್ನ ಹಾಕಿದ್ದಾರೆ.
ಸ್ಥಳಕ್ಕೆ ಹೊನ್ನಾಳಿ ಪೊಲೀಸರು ಸೇರಿದಂತೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಾಗಿದ್ದು ಕಳ್ಳತನ ಬೇಧಿಸಲು 2 ತಂಡಗಳನ್ನು ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ ತಿಳಿಸಿದ್ದಾರೆ.