ಬೆಂಗಳೂರು: ಎಂ ಚಿನ್ನಸ್ವಾಮಿಯಲ್ಲಿ ನಡೆದ ಕಾಲ್ತುಳಿತ ಪ್ರಕರಣ ಸಂಬಂಧ ಪೊಲೀಸ್ ಆಯುಕ್ತರಾದ ಬಿ. ದಯಾನಂದ ಅವರನ್ನು ಅಮಾನತು ಮಾಡಿರುವುದು ಭಾರೀ ಟೀಕೆಗೆ ಗುರಿಯಾಗಿದೆ.
ಈ ಬಗ್ಗೆ ಮಾಜಿ ಸಂಸದ ಪ್ರತಾಪ್ ಸಿಂಹ ಅವರು ಸಿಎಂ ಸಿದ್ದರಾಮಯ್ಯರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಬಿ ದಯಾನಂದ ಅವರೊಬ್ಬರು ನಿಷ್ಠಾವಂತ ಪೊಲೀಸ್ ಅಧಿಕಾರಿ. ಮಂಗಳೂರು, ಮೈಸೂರು ರಾಜ್ಯದ ಪ್ರತಿಯೊಂದು ಭಾಗದಲ್ಲಿ ತಮ್ಮ ಅಚ್ಚುಕಟ್ಟು ಕೆಲಸದಿಂದಲೇ ಗುರುತಿಸಿಕೊಂಡಿದ್ದಾರೆ.
ಅಮಾನತು ಮಾಡುವ ಮೂಲಕ ಒಳ್ಳೆಯ ಅಧಿಕಾರಿಯ 31 ವರ್ಷದ ಕೆರಿಯರ್ಗೆ ರಾಜ್ಯ ಸರ್ಕಾರ ಕಪ್ಪು ಚುಕ್ಕೆಯನ್ನು ಅಟ್ಟಿಸಿದೆ. ಸಿಎಂ ಕುರ್ಚಿಯನ್ನು ಉಳಿಸಿಕೊಳ್ಳುವ ಸಲುವಾಗಿ ಸಿಎಂ ಸಿದ್ದರಾಮಯ್ಯ ಅವರು ಈ ಕ್ರಮವನ್ನು ತೆಗೆದುಕೊಂಡಿದ್ದಾರೆ ಎಂದು ಆರೋಪಿಸಿದರು.
ಇದೇ ದಯಾನಂದ್ ಅವರು ಬೆಂಗಳೂರು ಕಮಿಷನರ್ ಆಗಿ ಕಳೆದ 2 ವರ್ಷದಿಂದ ಕೆಲಸ ಮಾಡಿದ್ದಾರೆ. ಮೋದಿ ಅವರು ಅದೆಷ್ಟೋ ರೋಡ್ ಶೋಗಳು ನಡೆದಿದೆ, ಕಾಂಗ್ರೆಸ್ ಸರ್ಕಾರದ ಸಾಕಷ್ಟು ರ್ಯಾಲಿಗಳು ನಡೆದಿದೆ ಆದರೆ ಒಂದೇ ಒಂದು ಅವಘಡಗಳು ಸಂಭವಿಸಿಲ್ಲ. ರಾಜಕಾರಣಿಗಳು ಮದುವೆಯಿಂದ ಹಿಡಿದು ಅವರ ಮರಣದವರೆಗೂ ನಿಮ್ಮನ್ನು ಕಾಯ್ಕೊಂಡು ಪೊಲೀಶರು ಕೂತಿರ್ತಾರೆ. ಪೊಲೀಸ್ ಇಲಾಖೆಯ ಅನುಮತಿ ಮೇರೆರೆಗೆ ನಡೆದ ಒಂದು ಕಾರ್ಯಕ್ರಮದಲ್ಲೂ ಇದುವರೆಗೆ ಅವಘಡ ಸಂಭವಿಸಿಲ್ಲ. ಅವರ ಅಭಿಪ್ರಾಯ ಕೇಳದೆ, ಸಿದ್ಧತೆಗೆ ಸಮಾಯಾವಕಾಶಕ್ಕೆ ಸಮಯನೂ ಕೇಳದೆ ಇದ್ದಿರುವುದಕ್ಕೆ ಈ ಅವಘಡ ಸಂಭವಿಸಿದೆ ಎಂದರು.
ರಾಜಕೀಯ ತೆವಳಿಗೆ ಪೊಲೀಸ್ ಇಲಾಖೆಯನ್ನು ಟಾರ್ಗೆಟ್ ಮಾಡಿ, ಇಂದು ಅದರ ಮುಖ್ಯಸ್ಥನನ್ನೇ ಅಮಾನತು ಮಾಡಲಾಗಿದೆ. ಸಿದ್ದರಾಮಯ್ಯ ಅವರು ಇಡೀ ಕರ್ನಾಟಕದ ಪೊಲೀಸ್ ಇಲಾಖೆಗೆ ಮಾಡಿದ ಅಪಪ್ರಚಾರವಿದು.