Publish Date: Fri, 29 May 2020 (12:36 IST)
Updated Date: Fri, 29 May 2020 (12:38 IST)
ಆಶಾ ಕಾರ್ಯಕರ್ತೆಯೊಬ್ಬರ ಮೇಲೆ ಹಲ್ಲೆ ಘಟನೆ ಮತ್ತೆ ಮರುಕಳಿಸಿದೆ.
ಮಂಡ್ಯ ಜಿಲ್ಲೆಯ ಕೃಷ್ಣರಾಜಪೇಟೆ ತಾಲ್ಲೂಕಿನ ಸಂತೇಬಾಚಹಳ್ಳಿ ಹೋಬಳಿಯ ಕೊಡಗಹಳ್ಳಿ ಗ್ರಾಮದಲ್ಲಿ ಆಶಾ ಕಾರ್ಯಕರ್ತೆ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ.
ಸಾಮಾಜಿಕ ಅಂತರ ಕಾಪಾಡಿಕೊಳ್ಳಿ, ಮುಖಕ್ಕೆ ಮಾಸ್ಕ್ ಧರಿಸಿ, ವಯಕ್ತಿಕ ಸ್ವಚ್ಛತೆಗೆ ಒತ್ತು ನೀಡಿ ಎಂದು ಕಿವಿಮಾತು ಹೇಳಿದ್ದಕ್ಕೆ ಕೊರೊನಾ ವಾರಿಯರ್ ಆಗಿರುವ ಕೊಡಗಹಳ್ಳಿ ಗ್ರಾಮದ ಆಶಾ ಕಾರ್ಯಕರ್ತೆ ಕೆ.ವೈ.ಶೋಭಾ ಅವರ ಮೇಲೆ ಗ್ರಾಮದ ಮಂಜೇಗೌಡ, ರುದ್ರೇಶ, ಪ್ರಿಯಾಂಕಾ, ಗೀತ ಮತ್ತು ನಿಖಿಲ್ ಅವರಿಂದ ಹಲ್ಲೆ ನಡೆದಿದೆ.
ತಾಲ್ಲೂಕಿನ ಕ್ವಾರಂಟೈನ್ ಕೇಂದ್ರದಿಂದ ಬಿಡುಗಡೆಯಾಗಿ ಕೊಡಗಹಳ್ಳಿ ಗ್ರಾಮಕ್ಕೆ ಆಗಮಿಸಿದ್ದ ನಾಲ್ವರಿಗೆ ಆರೋಗ್ಯ ತಿಳುವಳಿಕೆ ನೀಡುತ್ತಿದ್ದ ವೇಳೆ, ನಿನ್ನದು ಅತಿಯಾಯ್ತು...ನಮ್ಮ ಮೇಲೆ ದೌರ್ಜನ್ಯ ಮಾಡ್ತಿದ್ದೀಯಾ, ಮಾನಸಿಕ ಹಿಂಸೆ, ಕಿರುಕುಳ ನೀಡ್ತಿದ್ದೀಯ ಎಂದು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.
ತಮ್ಮ ಮೇಲೆ ಹಲ್ಲೆ ನಡೆಸಿರುವ ಐವರ ವಿರುದ್ಧ ಕೃಷ್ಣರಾಜಪೇಟೆ ಪಟ್ಟಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ ಆಶಾ ಕಾರ್ಯಕರ್ತೆ ಶೋಭಾ. ಹಲ್ಲೆ ಸಂದರ್ಭದಲ್ಲಿ ತಮ್ಮ ಮಾಂಗಲ್ಯ ಸರವನ್ನು ಆಶಾ ಕಾರ್ಯಕರ್ತೆ ಕಳೆದುಕೊಂಡಿದ್ದಾರೆ.