ಮೈಸೂರು: ತಾಯಿ ಚಾಮುಂಡೇಶ್ವರಿ ಜನ್ಮೋತ್ಸವ ಹಾಗೂ ಆಷಾಢ ಶುಕ್ರವಾರಗಳ ಆಚರಣೆ ಹಿನ್ನೆಲೆ ಮೈಸೂರು ಜಿಲ್ಲಾಡಳಿತ ಈಗಾಗಲೆ ಮುನ್ನೆಚ್ಚರಿಕ ಕ್ರಮವಾಗಿ ಅಗತ್ಯ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಪ್ರತಿವರ್ಷವೂ ಆಷಾಢ ಮಾಸದ ಸಂದರ್ಭದಲ್ಲಿ ಅಸಂಖ್ಯ ಭಕ್ತರು ತಾಯಿ ಚಾಮುಂಡೇಶ್ವರಿಯ ಆಶೀರ್ವಾದವನ್ನು ಪಡೆಯುತ್ತಾರೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಭಕ್ತಾದಿಗಳಿಗೆ ಕೆಲವು ಸೂಚನೆಗಳನ್ನು ನೀಡಿದೆ. ಆಷಾಢ ಶುಕ್ರವಾರ ಹಾಗೂ ವರ್ಧಂತಿ ದಿನಗಳಂದು ಯಾವುದೇ ಖಾಸಗಿ ವಾಹನಗಳಿಗೆ ಚಾಮುಂಡಿ ಬೆಟ್ಟಕ್ಕೆ ಪ್ರವೇಶವಿರುವುದಿಲ್ಲ. ಸರ್ಕಾರಿ ಬಸ್ಸುಗಳಲ್ಲಿ ಉಚಿತವಾಗಿ ಸಂಚರಿಸಬಹುದು ಎಂದು ಸಚಿವ ಡಾ.ಎಚ್.ಸಿ. ಮಹಾದೇವಪ್ಪ ತಿಳಿಸಿದರು.
ಇನ್ನೂ ಪಾರ್ಕಿಂಗ್ ವ್ಯವಸ್ಥೆಯನ್ನ ಭಕ್ತಾದಿಗಳಿಗೆ ಲಲಿತಾ ಮಹಲ್ ಹೊಟೇಲ್ನಲ್ಲಿ ಕಲ್ಪಿಸಲಾಗಿದೆ. ಜೂನ್ 27, ಜುಲೈ 04, ಜುಲೈ 11, ಜುಲೈ 18 ರಂದು ಆಷಾಢ ಶುಕ್ರವಾರಗಳು ಹಾಗೂ ಜುಲೈ 17 ರಂದು ಚಾಮುಂಡೇಶ್ವರಿ ದೇವಿಯ ವರ್ಧಂತಿ ನಡೆಯಲಿದೆ ಎಂದು ಮಾಹಿತಿ ನೀಡಿದರು.
ಆಷಾಢ ಶುಕ್ರವಾರ ಹಾಗೂ ಆಷಾಢ ಮಾಸದ ಶನಿವಾರ ಹಾಗೂ ಭಾನುವಾರಗಳಂದು ಸಾಮಾನ್ಯ ದರ್ಶನ ಉಚಿತವಾಗಿರುತ್ತದೆ. ಪ್ರವೇಶ ದರ್ಶನಕ್ಕೆ 50 ರೂ. ಹಾಗೂ ವಿಶೇಷ ದರ್ಶನಕ್ಕೆ 300 ರೂ. ಟಿಕೆಟ್ ನಿಗದಿ ಪಡಿಸಲಾಗಿದೆ ಎಂದು ಜಿಲ್ಲಾಡಳಿತ ತಿಳಿಸಿದೆ.