Publish Date: Thu, 09 Dec 2021 (19:34 IST)
Updated Date: Thu, 09 Dec 2021 (19:43 IST)
ಬೆಂಗಳೂರು: ಆಮ್ ಆದ್ಮಿ ಪಕ್ಷದ ಕೇಂದ್ರದ ರಾಜ್ಯ ಉಸ್ತುವಾರಿ ರೋಮಿ ಭಾಟಿಯವರಿಗೆ ಆಶೀರ್ವಾದ ಮಾಡಿದ ನಿರ್ಮಲಾನಂದ ಸ್ವಾಮೀಜಿ ದೆಹಲಿಯ ಅರವಿಂದ್ ಕೇಜ್ರಿವಾಲ್ ಆಡಳಿತದ ಬಗ್ಗೆ ಸಾಕಷ್ಟು ಕೇಳಿರುವೆ. ದೆಹಲಿಯಲ್ಲಿ ಜಾರಿಗೆ ತಂದಿರುವ ಜನಪರ ಯೋಜನೆಗಳು ನಮ್ಮಲ್ಲೂ ಜಾರಿಗೆ ಬರಲಿ. ಆಮ್ ಆದ್ಮಿ ಪಾರ್ಟಿಗೆ ಒಳಿತಾಗಲಿ. ರಾಜಕೀಯದಿಂದ ಭ್ರಷ್ಟಾಚಾರವನ್ನು ದೂರವಿಡುವ ನಿಮ್ಮ ಉದ್ದೇಶ ಶೀಘ್ರವೇ ಈಡೇರಲಿ ಎಂದು ಹೇಳಿದರು.
ಬೆಂಗಳೂರಿನ ವಿಜಯನಗರದಲ್ಲಿರುವ ಮಠದಲ್ಲಿ ಗುರುವಾರ ಸ್ವಾಮೀಜಿಯವರನ್ನು ಭೇಟಿಯಾದ ರೋಮಿ ಭಾಟಿ ಆಮ್ ಆದ್ಮಿ ಪಾರ್ಟಿಯ ತತ್ತ್ವ ಸಿದ್ಧಾಂತಗಳನ್ನು ವಿವರಿಸಿದರು. ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ರವರ ಸರ್ಕಾರವು ಶಿಕ್ಷಣ, ಆರೋಗ್ಯ, ಸಾರಿಗೆ, ಸುರಕ್ಷತೆ ಹಾಗೂ ಮೂಲ ಸೌಕರ್ಯಗಳಿಗೆ ಸಂಬಂಧಿಸಿ ಕ್ರಾಂತಿಕಾರಿ ಬದಲಾವಣೆ ತಂದಿರುವುದನ್ನು ಸ್ವಾಮೀಜಿಯವರಿಗೆ ಮನವರಿಕೆ ಮಾಡಿಕೊಟ್ಟರು. ಕರ್ನಾಟಕದಲ್ಲಿ ಗುತ್ತಿಗೆ ಕಾಮಗಾರಿಗಳಲ್ಲಿ ಶೇ 40 ರಷ್ಟು ಭ್ರಷ್ಟಾಚಾರ ನಡೆಯುತ್ತಿರುವುದರ ವಿರುದ್ಧ ಹೋರಾಡಲು ಆಮ್ ಆದ್ಮಿ ಪಾರ್ಟಿ ನಿರ್ಧರಿಸಿದ್ದು, ಈ ಸದುದ್ದೇಶದ ಹೋರಾಟದಲ್ಲಿ ಯಶಸ್ಸು ಸಿಗುವಂತೆ ಆಶೀರ್ವಾದ ಮಾಡಬೇಕೆಂದು ರೋಮಿ ಭಾಟಿ ಮನವಿ ಮಾಡಿದರು.
ಒಕ್ಕಲಿಗರ ಸಂಘದ ಚುನಾವಣೆಯ ಅಭ್ಯರ್ಥಿ ಚನ್ನಪ್ಪಗೌಡ ನೆಲ್ಲೂರು, ಎಎಪಿ ಮುಖಂಡರಾದ ನಂಜಪ್ಪ ಕಾಳೇಗೌಡ, ಲಕ್ಷ್ಮೀಕಾಂತ ರಾವ್, ಡಾ. ಸತೀಶ್ ಕುಮಾರ್, ಕುಶಲ ಸ್ವಾಮಿ, ಸುಹಾಸಿನಿ, ಡಾ. ರಮೇಶ್, ಜಗದೀಶ್ ಚಂದ್ರ ಜೊತೆಗಿದ್ದರು.