ಅರುಣಾಚಲ ಪ್ರದೇಶ: ಈ ಬಾರಿ ಮುಂಗಾರು ಮಳೆ ದೇಶದಾದ್ಯಂತ ಅಬ್ಬರಿಸುತ್ತಿದೆ. ಅರುಣಾಚಲ ಪ್ರದೇಶದಲ್ಲೂ ಭಾರೀ ಮಳೆಯಾಗಿದ್ದು, ಪ್ರವಾಹದ ನಡುವೆ ತೂಗಾಡುತ್ತಿರುವ ಸೇತುವೆಯಲ್ಲಿ ಹಗ್ಗ ಹಿಡಿದು ಯುವಕನೊಬ್ಬ ನದಿ ದಾಟುತ್ತಿರುವ ಮೈ ಝುಂ ಎನಿಸುವ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಅರುಣಾಚಲ ಪ್ರದೇಶದಲ್ಲಿ ಭಾರೀ ಮಳೆಯಿಂದಾಗಿ ಪ್ರವಾಹದ ಪರಿಸ್ಥಿತಿಯಿದೆ. ಈ ನಡುವೆ ಜನ ಸುರಕ್ಷಿತ ಸ್ಥಳಗಳಿಗೆ ತೆರಳಿ ತಮ್ಮ ಜೀವ ಉಳಿಸಿಕೊಳ್ಳಲು ಪರದಾಡುತ್ತಿದ್ದಾರೆ. ಇದೇ ರೀತಿ ಯುವಕನೊಬ್ಬ ಪ್ರಾಣದ ಹಂಗು ತೊರೆದು ನದಿ ದಾಟುವ ದೃಶ್ಯ ವೈರಲ್ ಆಗಿದೆ.
ಅರುಣಾಚಲ ಪ್ರದೇಶದ ಅಂಜಾವ್ ಜಿಲ್ಲೆಯ ಭಾರತ-ಚೀನಾ ಗಡಿ ಭಾಗದಲ್ಲಿ ಘಟನೆ ಸಂಭವಿಸಿದೆ. ಭಾರೀ ರಭಸದಿಂದ ನದಿ ದುಮ್ಮಿಕ್ಕಿ ಹರಿಯುತ್ತಿದ್ದು ಅದರ ಮೇಲೆ ತೂಗು ಸೇತುವೆಯೊಂದಿದೆ. ಪ್ರವಾಹದ ರಭಸಕ್ಕೆ ಸೇತುವೆಯೇ ಅಲುಗಾಡುತ್ತಿದೆ.
ಹಾಗಿದ್ದರೂ ಯುವಕ ಮೇಲೆ ಒಂದು ಹಗ್ಗ ಹಿಡಿದುಕೊಂಡು ತೇಲಾಡುತ್ತಿರುವ ಸೇತುವೆಯಲ್ಲಿ ಹರಸಾಹಸ ಮಾಡಿ ಅತ್ತ ದಾಟುತ್ತಿದ್ದಾನೆ. ಈ ವಿಡಿಯೋ ನೋಡಿದರೆ ಮೈ ಝುಂ ಎನಿಸುತ್ತದೆ.