Publish Date: Fri, 18 Mar 2022 (15:34 IST)
Updated Date: Fri, 18 Mar 2022 (15:36 IST)
ಬೆಂಗಳೂರು : ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬರುವ ಏ.1ಕ್ಕೆ ರಾಜ್ಯಕ್ಕೆ ಆಗಮಿಸುವ ಸಾಧ್ಯತೆಯಿದೆ.
ಅವರು ಅಧಿಕೃತ ಕಾರ್ಯಕ್ರಮಗಳ ಹಿನ್ನೆಲೆಯಲ್ಲಿ ಆಗಮಿಸುತ್ತಿದ್ದು, ಇದೇ ವೇಳೆ ಸಂಪುಟ ಕಸರತ್ತಿನ ಬಗ್ಗೆಯೂ ಪಕ್ಷದ ನಾಯಕರೊಂದಿಗೆ ಚರ್ಚೆ ನಡೆಯುವುದೇ ಎಂಬುದು ಕುತೂಹಲಕರವಾಗಿದೆ.
ಕೇಂದ್ರದ ಸಹಕಾರ ಇಲಾಖೆಯ ಹೊಣೆಯನ್ನೂ ಹೊತ್ತಿರುವ ಅವರು ರಾಜ್ಯ ಸಹಕಾರ ಇಲಾಖೆಯ ಸಮಾರಂಭಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ರಾಜ್ಯದ ಗೃಹ ಇಲಾಖೆಯೂ ಕಾರ್ಯಕ್ರಮ ಆಯೋಜಿಸುವ ಸಂಭವವಿದೆ. ಇದಲ್ಲದೆ ಸುತ್ತೂರು ಮತ್ತು ಸಿದ್ದಗಂಗಾ ಶ್ರೀಗಳನ್ನು ಭೇಟಿ ಮಾಡುವ ಬಗ್ಗೆ ಚರ್ಚೆ ನಡೆದಿದೆ ಎಂದು ತಿಳಿದು ಬಂದಿದೆ.
ಚುನಾವಣೆ ಬೆನ್ನಲ್ಲೇ ರಾಜ್ಯದಲ್ಲಿ ಬಜೆಟ್ ಅಧಿವೇಶನ ನಡೆಯುತ್ತಿರುವುದರಿಂದ ಅದು ಮುಗಿಯುವವರೆಗೆ ಸಂಪುಟ ಕಸರತ್ತಿನ ಬಗ್ಗೆ ಯಾವುದೇ ಚರ್ಚೆ ಬೇಡ ಎಂಬ ನಿಲವಿಗೆ ಪಕ್ಷದ ನಾಯಕರು ಬಂದಿದ್ದರು.
ಇದೀಗ ಅಮಿತ್ ಶಾ ಅವರು ರಾಜ್ಯಕ್ಕೆ ಬರುವ ಹೊತ್ತಿಗೆ ಬಜೆಟ್ ಅಧಿವೇಶನವೂ ಮುಗಿದಿರುತ್ತದೆ. ಹೀಗಾಗಿ, ಅವರು ರಾಜ್ಯಕ್ಕೆ ಬಂದಾಗಲೇ ಮಾತುಕತೆ ನಡೆಯಬಹುದು ಎನ್ನಲಾಗುತ್ತಿದೆ.