Publish Date: Wed, 26 Jun 2024 (19:21 IST)
Updated Date: Wed, 26 Jun 2024 (19:45 IST)
ಕನಕಗಿರಿ: ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ರೈತ ಕುಟುಂಬದ ಯುವಕನೊಬ್ಬ ಕನ್ಯಾ ಹುಡುಕಿಕೊಡುವಂತೆ ಜಿಲ್ಲಾಧಿಕಾರಿ ಮನವಿ ಮಾಡಿದ ಘಟನೆ ನಡೆದಿದೆ.
ಇಲ್ಲಿನ ಎಪಿಎಂಸಿ ಕಲ್ಯಾಣ ಮಂಟಪದಲ್ಲಿ ಜಿಲ್ಲಾಡಳಿತದ ವತಿಯಿಂದ ಬುಧವಾರ ನಡೆದ ತಾಲ್ಲೂಕು ಮಟ್ಟದ ಜನಸ್ಪಂದನ ಕಾರ್ಯಕ್ರಮದಲ್ಲಿ ಕನಕಗಿರಿಯ ಗೌಡರ ಓಣಿ ಯುವಕ ಸಂಗಪ್ಪ ಎಂಬುವವರು ತಮಗೆ ಕನ್ಯಾ ಹುಡುಕಿಕೊಡುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಅವರಿಗೆ ಹೀಗೆ ಮನವಿ ಮಾಡಿಕೊಂಡಿದ್ದಾರೆ.
ಮನವಿಯಲ್ಲಿ ಏನಿದೆ: ಕಳೆದ 10 ವರ್ಷಗಳಿಂದ ಕನ್ಯಾ ಹುಡುಕುತ್ತಿದ್ದರೂ ಸಿಗುತ್ತಿಲ್ಲ. ಆದಷ್ಟು ಬೇಗನೆ ಕನ್ಯಾ ಹುಡುಕಿಕೊಡಿ ಸರ್ ಎಂದು ಮನವಿಯಲ್ಲಿ ಬೇಸರ ವ್ಯಕ್ತಪಡಿಸಿದ್ದಾನೆ.
ಜನಸ್ಪಂದನ ಕಾರ್ಯಕ್ರಮದಲ್ಲಿ ಡಿಸಿ ಆಹವಾಲು ಸ್ವೀಕರಿಸುತ್ತಿದ್ದಾಗ ವೇದಿಕೆಯತ್ತ ಬಂದ ಸಂಗಪ್ಪ ಎಂಬ ವ್ಯಕ್ತಿ, 'ರೈತ ಕುಟುಂಬದಿಂದ ಬಂದಿರುವ ನಾನು ಕಳೆದ 10 ವರ್ಷಗಳಿಂದ ಕನ್ಯಾ ಅನ್ವೇಷಣೆಗಾಗಿ ಲಕ್ಷಾಂತರ ರೂಪಾಯಿ ಕಳೆದುಕೊಂಡಿದ್ದೇನೆ. ಯಾರೂ ಕನ್ಯಾ ನೀಡಲು ಮುಂದೆ ಬರುತ್ತಿಲ್ಲ, ಹೀಗಾಗಿ ಮಾನಸಿಕವಾಗಿ ನೊಂದಿದ್ದೇನೆ, ನೀವಾದರೂ ಕನ್ಯಾ ಹುಡುಕಿ ನನ್ನ ಮದುವೆಗೆ ಸಹಕರಿಸಿ' ಎಂದು ಲಿಖಿತ ಮನವಿ ಕೊಟ್ಟರು.