Publish Date: Mon, 05 Jun 2023 (19:00 IST)
Updated Date: Mon, 05 Jun 2023 (20:03 IST)
ಹುಬ್ಬಳ್ಳಿಯ ಕಲಘಟಗಿಯಲ್ಲಿ ಹಸೆಮಣೆ ಏರಬೇಕಿದ್ದ ನಿಂಗಪ್ಪ ನವಲೂರ ಎನ್ನುವ ಯುವಕನ ಕೊಲೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದೆ. ಜೂನ್ 7ರಂದು ಮದುವೆಯಾಗಬೇಕಿದ್ದ ಯುವಕನ ಹತ್ಯೆ ಪ್ರಕರಣವನ್ನು ಕಲಘಟಗಿ ಪೊಲೀಸರು ಘಟನೆ ನಡೆದ 48 ಗಂಟೆಗಳಲ್ಲಿ ಭೇದಿಸಿದ್ದಾರೆ. ವಿವಾಹಿತೆ ಜೊತೆಗಿನ ಅನೈತಿಕ ಸಂಬಂಧವೇ ಕೊಲೆಗೆ ಕಾರಣ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ನಿಂಗಪ್ಪ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯ ಪತಿ ಹಾಗೂ ಆತನ ಸಹೋದರನನ್ನು ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೂನ್ 7ರಂದು ತಾವರಗೆರೆ ಗ್ರಾಮದ ಯುವತಿ ಜೊತೆ ಮದುವೆ ನಿಶ್ಚಯವಾಗಿತ್ತು. ಆದ್ರೆ, ಮದುವೆಗೆ ಐದು ದಿನಗಳ ಮುಂಚೆ ನಿಂಗಪ್ಪ ತೋಟದ ಮನೆಯಲ್ಲಿ ಕೊಲೆಯಾಗಿದ್ದ. ಕಲಘಟಗಿ ತಾಲೂಕಿನ ಜಿನ್ನೂರು ಗ್ರಾಮದ ತೋಟದ ಮನೆಯಲ್ಲಿ ಮಧ್ಯರಾತ್ರಿ ನಿಂಗಪ್ಪನ ಕಣ್ಣಿಗೆ ಖಾರದ ಪುಡಿ ಎರಚಿ ಕತ್ತು ಹಿಸುಕಿ ಕೊಲೆ ಮಾಡಲಾಗಿತ್ತು. ಇನ್ನೇನು ಐದೇ ದಿನದಲ್ಲಿ ಮದುವೆಯಾಗಿ ಹೊಸ ಜೀವನ ಆರಂಭಿಸಬೇಕಿದ್ದ ನಿಂಗಪ್ಪ ಮಸಣ ಸೇರಿದ್ದ. ಇದರಿಂದ ಮದುವೆ ಮನೆಯಲ್ಲಿ ನೀರವ ಮೌನ ಆವರಿಸಿತ್ತು. ಹತ್ಯೆಗೆ ಅನೈತಿಕ ಸಂಬಂಧವೇ ಕಾರಣ ಎಂದು ತಿಳಿದುಬಂದಿದೆ. ಅಲ್ಲದೇ ಕೊಲೆ ಆರೋಪಿಗಳಾದ ಮಹಿಳೆಯ ಗಂಡ ಮುತ್ತಪ್ಪ ಹಾಗೂ ಆತನ ಸಹೋದರ ವೀರಭದ್ರ ಜಾಲಿಹಾಳ ಎನ್ನುವಾತನನ್ನು ಪೊಲೀಸರು ಬಂಧಿಸಿದ್ದಾರೆ.