Publish Date: Mon, 07 Oct 2024 (17:38 IST)
Updated Date: Mon, 07 Oct 2024 (17:42 IST)
ಬೆಂಗಳೂರು: ಸಫಾರಿ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರ ಮಿನಿ ಬಸ್ನ ಮೇಲೆ ಚಿರತೆ ಎಗರಿರುವ ಘಟನೆ ಭಾನುವಾರ ಆನೇಕಲ್ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ನಡೆದಿದೆ.
ಹತ್ತಿರದಲ್ಲಿ ಚಿರತೆಯನ್ನು ನೋಡಲು ಸಫಾರಿ ವಾಹನವನ್ನು ನಿಲ್ಲಿಸಿದ್ದಾರೆ. ಈ ವೇಳೆ ಅಲ್ಲೇ ಇದ್ದ ಚಿರತೆ ಏಕಾಏಕಿ ವಾಹನದ ಕಿಟಕಿಯನ್ನು ಹಿಡಿದು ದಾಳಿ ಮಾಡಲು ಯತ್ನಿಸಿದೆ. ವಾಹನದಲ್ಲಿದ್ದ ಕೆಲ ಪ್ರವಾಸಿಗರಿಗೆ ಆತಂಕವಾಗಿದ್ದು, ಮತ್ತೇ ಕೆಲವರು ಚಿರತೆಯನ್ನು ಹತ್ತಿರ ನೋಡಿ ಖುಷಿ ಪಟ್ಟಿದ್ದಾರೆ.
ಚಿರತೆ ಸಫಾರಿ ವಾಹನದ ಮೇಲೆ ದಾಳಿ ಮಾಡುತ್ತಿರುವುದನ್ನು ಹಿಂದಿನ ವಾಹನದಲ್ಲಿದ್ದ ಪ್ರವಾಸಿಗರು ಸೆರೆ ಹಿಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಇತ್ತೀಚಿಗೆ ಆರಂಭವಾಗಿರುವ ಚಿರತೆ ಸಫಾರಿಯಲ್ಲಿ ಚಿರತೆಗಳು ಬಸ್, ಜೀಪ್ ಬಳಿ ಬರುವುದು, ಕೆಲವು ಬಾರಿ ಬಸ್, ಜೀಪ್ಗಳ ಮೇಲೆ ಹತ್ತುವ ವಾಡಿಕೆ ಮಾಡಿಕೊಂಡಿವೆ.
ಅದೇ ರೀತಿ ಇಂದು ಸಹ ಒಂದು ಚಿರತೆ ಬಸ್ ಮೇಲೆ ಏರಿ ಕಿಟಕಿಗಳಲ್ಲಿ ಪ್ರವಾಸಿಗರನ್ನು ನೋಡಿ ಘರ್ಜಿಸಿದೆ. ನಂತರ ಚಾಲಕ ಬಸ್ ನಿಧಾನವಾಗಿ ಮುಂದಕ್ಕೆ ಚಲಿಸುತ್ತಿದ್ದಂತೆ ಬಸ್ನಿಂದ ಕೆಳಕ್ಕೆ ಹಾರಿ ಹೋಗಿದೆ.