Publish Date: Fri, 27 Jul 2018 (15:17 IST)
Updated Date: Fri, 27 Jul 2018 (15:24 IST)
ದೇವರು ವರ ಕೊಟ್ರು ಪೂಜಾರಿ ಕೊಡ್ತಿಲ್ಲ ಎನ್ನುವಂತಾಗಿದೆ ಆ ಊರಿನ ಜನರ ಪರಿಸ್ಥಿತಿ. ಕುಗ್ರಾಮದ ಪರಿಸ್ಥಿತಿ ಏನು.. ಮುಂದೆ ಓದಿ…
ವಿಜಯಪುರ ಜಿಲ್ಲೆಯ ಸಿಂದಗಿ ತಾಲೂಕಿನ ಗೋಲಗೇರಿ ಗ್ರಾಮದ ನಿವಾಸಿಗಳ ಕಥೆ ಇದು. ಸರ್ಕಾರ 20 ಲಕ್ಷ ರೂಪಾಯಿ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನ ಸ್ಥಾಪಿಸಿದೆ. ಆದ್ರೆ ಗ್ರಾಮದಲ್ಲಿ ಜನರು ಕೊಳಕು ನೀರು ಸೇವನೆ ಮಾಡುವುದು ಮಾತ್ರ ತಪ್ಪಿಲ್ಲ. ಯಾಕಂದ್ರೆ ಲಕ್ಷಾಂತರ ರೂಪಾಯಿ ವೆಚ್ಚದಲ್ಲಿ ಆರ್.ಓ ಪ್ಲಾಂಟ್ ನಿರ್ಮಾಣವಾದ್ರು, ಅವುಗಳಿಗೆ ಚಾಲನೆ ಮಾತ್ರ ಸಿಕ್ಕಿಲ್ಲ.
ಕಳೆದ ನಾಲ್ಕು ತಿಂಗಳುಗಳಿಂದ ಸ್ಥಾಪನೆಯಾಗಬೇಕಿದ್ದ ಶುದ್ದ ಕುಡಿಯುವ ನೀರಿನ ಘಟಕ ಸ್ಥಾಪನೆಯಾಗದೇ ಜನಪ್ರತಿನಿಧಿಗಳ ತಿಕ್ಕಾಟಕ್ಕೆ ಶುದ್ದ ಕುಡಿಯುವ ನೀರಿನ ಘಟಕ ಈ ವರೆಗೂ ಆರಂಭಿಸಿಲ್ಲ. ಹೀಗಾಗಿ ಗ್ರಾಮಸ್ಥರು ಅನಿವಾರ್ಯವಾಗಿ ಅಶುದ್ಧ ನೀರನ್ನೆ ಕುಡಿದು ಬದುಕಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಇದರಿಂದಾಗಿ ಗ್ರಾಮಸ್ಥರಲ್ಲಿ ಜ್ವರ, ಡೆಂಘ್ಯು, ಮಲೇರಿಯಾ ಸೇರಿದಂತೆ ಹತ್ತಾರು ರೋಗಗಳಿಂದ ಪೀಡಿತರಾಗಿದ್ದಾರೆ.
ಈ ಬಗ್ಗೆ ಗ್ರಾಮ ಪಂಚಾಯತಿ ಅಧಿಕಾರಿಗಳ ಗಮನಕ್ಕೆ ತಂದ್ರು ಪ್ರಯೋಜನವಾಗ್ತಿಲ್ಲ. ನಾಮಕಾವಾಸ್ತೆ ಎನ್ನುವಂತೆ ಘಟಕ ನಿರ್ಮಿಸಿ ಕೈತೊಳೆದುಕೊಂಡ ಅಧಿಕಾರಿಗಳು ವಿದ್ಯುತ್ ಸಂಪರ್ಕ ನೀಡದೆ ನಿರ್ಲಕ್ಷ್ಯತನ ಪ್ರದರ್ಶಿಸುತ್ತಿದ್ದಾರೆ.