Publish Date: Tue, 13 Aug 2024 (16:08 IST)
Updated Date: Tue, 13 Aug 2024 (16:11 IST)
ಕೊಪ್ಪಳ: ತುಂಗಭದ್ರಾ ಜಲಾಶಯಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಅವರು ಭೇಟಿ ನೀಡಿ ಮುರಿತವಾಗಿರುವ 19ನೇ ಕ್ರಸ್ಟ್ ಗೇಟ್ ವೀಕ್ಷಣೆ ಮಾಡಿ, ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದರು.
ಈ ವೇಳೆ ಮಾಧ್ಯಮದವರ ಜತೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, 1952-53ರ ವೇಳೆಗೆ ತುಂಗಭದ್ರಾ ಜಲಾಶಯ ಪೂರ್ಣಗೊಂಡಿತ್ತು. ಅಂದಿನಿಂದ ಇಂದಿನವರೆಗೆ ಯಾವುದೇ ತೊಂದರೆಯಾಗಿರಲಿಲ್ಲ. ಆದರೆ ಇದೀಗ 19ನೇ ಗೇಟ್ ಚೈನ್ ಮುರಿದು ಸಮಸ್ಯೆಯಾಗಿದೆ. ಸದ್ಯ ಗೇಟ್ ರಿಪೇರಿ ಮಾಡಲು 60ಟಿಎಂಸಿನಷ್ಟು ನೀರು ಹೊರಕ್ಕೆ ಬಿಡಬೇಕು. ಇಲ್ಲದಿದ್ರೆ ರಿಪೇರಿ ಕಾರ್ಯ ಮಾಡಲು ಕಷ್ಟವಾಗುತ್ತದೆ. ನೀರು ಹೊರಕ್ಕೆ ಬಿಡುವುದಕ್ಕೆ ರೈತರು ಚಿಂತಿಸುವ ಅಗತ್ಯವಿಲ್ಲ.ಅಕ್ಟೋಬರ್ವರೆಗೆ ಮಳೆಯಾಗುವ ಸಾಧ್ಯತೆಯಿದ್ದು, ವಿಶ್ವಾಸದಿಂದ ಇರಿ ಎಂದು ರೈತರಿಗೆ ಧೈರ್ಯ ತುಂಬಿದರು.
ನಮ್ಮದು ರೈತ ಪರ ಸರ್ಕಾರ, ಯಾರಿಗೂ ತೊಂದರೆಯಾಗಲು ನಾವು ಬಿಡುವುದಿಲ್ಲ. ಬಿಜೆಪಿಯವರು ಇದೀಗ ಇದನ್ನು ರಾಜಕೀಯವಾಗಿ ಬಳಸುತ್ತಿದೆ. ಆದರೆ ಜಲಾಶಯಗಳ ನಿರ್ವಹಣೆ ಬೋರ್ಡ್ನಲ್ಲಿ ಇದು ಕೇಂದ್ರದ ಸುಪರ್ದಿಗೆ ಬರುತ್ತದೆ ಎಂಬುದಿದೆ. ಈ ಬೋರ್ಡ್ನಲ್ಲಿ ತೆಲಂಗಾಣ, ಆಂಧ್ರ ಪ್ರದೇಶ ಹಾಗೂ ಕರ್ನಾಟಕ ಅಧಿಕಾರಿಗಳು ಇದ್ದಾರೆ. ಈ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಸರಿಪಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು.
ಇನ್ನೂ ಸಿಎಂ ಸಿದ್ದರಾಮಯ್ಯ ಅವರು ಭೇಟಿ ಹಿನ್ನೆಲೆ ಜಲಾಶಯದ ಬಳಿ ಬಿಗಿಬಂದೋಬಸ್ತ್ ಮಾಡಲಾಗಿತ್ತು. ಒಬ್ಬರು ಎಸ್ಪಿ, ಇಬ್ಬರು ಅಡಿಷನಲ್ ಎಸ್ಪಿ ಸೇರಿದಂತೆ 400ಕ್ಕೂ ಸಿಬ್ಬಂದಿಯನ್ನ ನಿಯೋಜಿಸಲಾಗಿತ್ತು. ಅಲ್ಲದೇ ಮುಖ್ಯ ದ್ವಾರದ ಮುಂದೆ ಸಾರ್ವಜನಿಕರ ಅಹವಾಲು ಸ್ವೀಕಾರಕ್ಕೂ ವ್ಯವಸ್ಥೆ ಮಾಡಲಾಗಿತ್ತು.