Publish Date: Tue, 28 Dec 2021 (08:35 IST)
Updated Date: Tue, 28 Dec 2021 (08:39 IST)
ಬೆಂಗಳೂರು : ಕಡಿಮೆ ಬಡ್ಡಿ ದರದಲ್ಲಿ 400 ಕೋಟಿ ರೂ. ಸಾಲ ಕೊಡಿಸುವುದಾಗಿ ನಂಬಿಸಿ ಇಬ್ಬರು ಉದ್ಯಮಿಗಳಿಂದ ಮುಂಗಡವಾಗಿ 5.85 ಕೋಟಿ ರೂ. ಬಡ್ಡಿ ಪಡೆದು ವಂಚಿಸಿದ್ದ ಐದು ಮಂದಿ ಆರೋಪಿಗಳನ್ನು ಸುದ್ದಗುಂಟೆಪಾಳ್ಯ ಠಾಣೆ ಪೊಲೀಸರು ಬಂಧಿಸಿದ್ದಾರೆ.
ಕೇರಳ ಮೂಲದ ಸೈಯ್ಯದ್ ಇಬ್ರಾಹಿಂ ಅಲಿಯಾಸ್ ಡ್ಯಾನಿಯಲ್ ಆರ್ಮ್ಸ್ಟ್ರಾಂಗ್, ಕೊಯಮತ್ತೂರಿನ ವಿವೇಕ್ ಅಲಿಯಾಸ್ ವಿಕ್ಕಿ ಅಲಿಯಾಸ್ ವಿವೇಕಾನಂದ, ಕ್ರಿಸ್ಟೋಫರ್ ಅಲಿಯಾಸ್ ರಾಘವನ್, ರಘುವರನ್ ಅಲಿಯಾಸ್ ರಘು, ಶಿವರಾಮನ್ ಅಲಿಯಾಸ್ ನಾಗರಾಜು ಬಂಧಿತರು.
ಆರೋಪಿಗಳಿಂದ 4.10 ಕೋಟಿ ರೂ. ಮೌಲ್ಯದ 8 ಕೆ.ಜಿ 215 ಗ್ರಾಂ ಚಿನ್ನಾಭರಣ, 35 ಲಕ್ಷ ರೂ. ಬೆಲೆ ಬಾಳುವ ಬಿಎಂಡಬ್ಲ್ಯು ಕಾರು, 10 ಲಕ್ಷ ರೂ. ಗಳ ಎರ್ಟಿಗಾ, 36.60 ಲಕ್ಷ ರೂ. ನಗದನ್ನು ವಶಕ್ಕೆ ಪಡೆಯಲಾಗಿದೆ. 1.86 ಲಕ್ಷ ರೂ. ಫ್ರೀಜ್ ಮಾಡಲಾಗಿದೆ.
45 ಲಕ್ಷ ರೂ.ಗಳನ್ನು ಆರೋಪಿಗಳು ಖರ್ಚು ಮಾಡಿದ್ದಾರೆ. ಚಿನ್ನ ಖರೀದಿಗೆ ಸಂಬಂಧಿಸಿದಂತೆ 33 ಲಕ್ಷ ರೂ. ಜಿಎಸ್ಟಿ ಹಾಗೂ ಸಿಎಸ್ಟಿ ಪಾವತಿಸಿದ್ದಾರೆ ಎಂದು ಪೊಲೀಸರು ತಿಳಿಸಿದರು.