ಬೆಂಗಳೂರು: ಕನ್ನಡಿಗರ ಬಳಿ ನಟ ಕಮಲ್ ಹಾಸನ್ ಅವರು ಕ್ಷಮೆ ಕೇಳದಿದ್ದರೆ ಯಾವುದೇ ಕಾರಣಕ್ಕೂ ಥಗ್ ಲೈಫ್ ಸಿನಿಮಾವನ್ನು ಬಿಡುಗಡೆ ಮಾಡಲು ಬಿಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಎಂ.ನರಸಿಂಹಲು ಹೇಳಿದರು.
ಸೋಮವಾರ ಕನ್ನಡ ಪರ ಸಂಘಟನೆಗಳ ಮನವಿ ಸ್ವೀಕರಿಸಿ ಮಾತನಾಡಿದ ಅವರು, ಕಮಲ್ ಹಾಸನ್ ಅವರ ಮಾತನ್ನು ತ್ರರಂಗ ಮಾತ್ರವಲ್ಲದೆ, ಕನ್ನಡ ಪರ ಸಂಘಟನೆಗಳು ಹಾಗೂ ಎಲ್ಲ ಪಕ್ಷದ ನಾಯಕರೂ ಖಂಡಿಸಿದ್ದಾರೆ. ಚಿತ್ರಮಂದಿರಗಳ ಮಾಲೀಕರು, ವಿತರಕರು ಬೇರೆ ಸಿನಿಮಾಗಳನ್ನು ಹಾಕಿಕೊಳ್ಳಲು ಸಿದ್ಧತೆ ನಡೆಸಿದ್ದಾರೆ ಎಂದರು.
ಕ್ಷಮೆ ಕೇಳಿದರೂ ತಕ್ಷಣದಲ್ಲೇ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ದೂರು ನೀಡಿದವರ ಜೊತೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ. ಕಮಲ್ ಹಾಸನ್ ದುಬೈನಲ್ಲಿದ್ದಾರೆ. ಮಂಗಳವಾರ(ಜೂನ್ 3) ಚೆನ್ನೈಗೆ ಮರಳುತ್ತಿದ್ದಾರೆ ಎನ್ನುವ ಮಾಹಿತಿ ಇದೆ. ಥಗ್ಲೈಫ್ ಸಿನಿಮಾದ ವಿತರಕರು ಜೂನ್ 3ರ ಮಧ್ಯಾಹ್ನದವರೆಗೆ ಸಮಯ ಕೇಳಿದ್ದಾರೆ ಎಂದು ನರಸಿಂಹಲು ತಿಳಿಸಿದರು.
ಕಮಲ್ ಹಾಸನ್ ಪರ ತಮಿಳುನಾಡು ಚಿತ್ರೋದ್ಯಮ ನಿಂತಿದೆ. ಆ ಕೆಲಸ ಇಲ್ಲಿ ಆಗಬೇಕು. ನಮ್ಮ ಕಲಾವಿದರ ಸಂಘಕ್ಕೆ ನಾಡಿನ ಬಗ್ಗೆ ಗೌರವ ಇದ್ದರೆ ಅವರೇ ಮುಂದೆ ಬರಬೇಕು. ಇದು ಎಲ್ಲರ ಕರ್ತವ್ಯ. ರಾಜ್ಯದ ಸ್ವಾಭಿಮಾನದ ಪ್ರಶ್ನೆ ಇದು ಎಂದರು.
ಕಮಲ್ ಹಾಸನ್ ಸಿನಿಮಾ ಬಿಡುಗಡೆಗೆ ಅವಕಾಶ ನೀಡುವುದಿಲ್ಲ. ತನ್ನ ಈ ನಿರ್ಧಾರದಲ್ಲಿ ವಾಣಿಜ್ಯ ಮಂಡಳಿ ಒಂದು ಹೆಜ್ಜೆಯೂ ಹಿಂದಕ್ಕೆ ಹೋಗಲ್ಲ. ಸಿನಿಮಾದ ಹಂಚಿಕೆದಾರರು ಒಬ್ಬ ಕನ್ನಡಿಗ. ಅವರಿಗೆ ಅನ್ಯಾಯ ಆಗಬಾರದು ಎನ್ನುವ ಉದ್ದೇಶದಿಂದ ಸಮಯ ನೀಡಿದ್ದೇವೆ. ಕಮಲ್ ಹಾಸನ್ಗಾಗಿ ನಾವು ಕಾಯುತ್ತಿಲ್ಲ ಎಂದು ನಿರ್ಮಾಪಕ ಸಾ.ರಾ.ಗೋವಿಂದು ಹೇಳಿದರು.