ಬೆಂಗಳೂರು: ಕನ್ನಡ ವಿವಾದದಿಂದಾಗಿ ಆಕ್ರೋಶಕ್ಕೊಳಗಾಗಿರುವ ಬಹುಭಾಷಾ ನಟ ಕಮಲ್ ಹಾಸನ್ ಗೆ ಕನ್ನಡತಿ ಖ್ಯಾತಿಯ ನಟಿ ರಂಜನಿ ರಾಘವನ್ ತಾವು ಬರೆದ ಕನ್ನಡ ಪುಸ್ತಕವೊಂದನ್ನು ನೀಡಿದ್ದು ಕನ್ನಡಿಗರು ಇದಕ್ಕೆ ಪರ್ಫೆಕ್ಟ್ ಎಂದು ಹೊಗಳಿದ್ದಾರೆ.
ಕನ್ನಡ ಭಾಷೆ ತಮಿಳಿನಿಂದ ಹುಟ್ಟಿದ್ದು ಎಂದು ಕಮಲ್ ಹಾಸನ್ ಹೇಳಿದ್ದು ಭಾರೀ ವಿವಾದಕ್ಕೆ ಕಾರಣವಾಗಿದೆ. ಈ ನಡುವೆ ಅವರಿಗೆ ಕ್ಷಮೆ ಯಾಚಿಸಲು ಕನ್ನಡಿಗರು ಆಗ್ರಹಿಸುತ್ತಿದ್ದಾರೆ. ಆದರೆ ಅವರು ಮಾತ್ರ ನಾನು ತಪ್ಪು ಮಾಡಿಲ್ಲ, ಕ್ಷಮೆ ಕೇಳಲ್ಲ ಎಂದು ಉದ್ಧಟತನ ತೋರಿದ್ದಾರೆ.
ಘಟನೆ ಬಗ್ಗೆ ಹಲವು ಸೆಲೆಬ್ರಿಟಿಗಳು, ಸಾಮಾನ್ಯರು ಕಟುವಾದ ಶಬ್ಧಗಳಲ್ಲಿ ಕಮಲ್ ಹಾಸನ್ ವಿರುದ್ಧ ಕಿಡಿ ಕಾರಿದ್ದಾರೆ. ಆದರೆ ಕನ್ನಡತಿ ರಂಜನಿ ರಾಘವನ್ ಮಾತ್ರ ಒಂದೇ ಒಂದು ಮಾತನಾಡದೇ ಫೋಟೋ ಮೂಲಕವೇ ಕಮಲ್ ಹಾಸನ್ ಗೆ ತಿರುಗೇಟು ನೀಡಿದ್ದಾರೆ.
ಎಲ್ಲರಿಗೂ ಗೊತ್ತಿರುವ ಹಾಗೆ ರಂಜನಿ ರಾಘವನ್ ಬರಹಗಾರ್ತಿ ಕೂಡಾ. ತಾವೇ ಬರೆದ ಕತೆ ಡಬ್ಬಿ ಪುಸ್ತಕದ ಪ್ರತಿಯೊಂದನ್ನು ಕಮಲ್ ಹಾಸನ್ ಗೆ ನೀಡುತ್ತಿರುವ ಫೋಟೋ ಮತ್ತು ವಿಡಿಯೋವನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ರಂಜಿನಿ ರಾಘವನ್ ಕಮಲ್ ಸರ್ ಗೆ ಒಂದು ಕನ್ನಡ ಪುಸ್ತಕ ಎಂದು ಬರೆದುಕೊಂಡಿದ್ದಾರೆ. ಆ ಮೂಲಕ ಸೈಲೆಂಟಾಗಿಯೇ ಕಮಲ್ ಹಾಸನ್ ಗೆ ಬಿಸಿ ಮುಟ್ಟಿಸಿದ್ದಾರೆ. ಅವರ ಈ ಫೋಟೋಗೆ ಸಾಕಷ್ಟು ಜನ ಕಾಮೆಂಟ್ ಮಾಡಿದ್ದು ಸರಿಯಾಗಿ ಮಾಡಿದ್ದೀರಿ ಮೇಡಂ. ಹಾಗೆಯೇ ಸ್ವಲ್ಪ ನಿಮ್ಮ ಕನ್ನಡತಿ ಧಾರವಾಹಿಯನ್ನೂ ಅವರಿಗೆ ತೋರಿಸಬೇಕಿತ್ತು ಎಂದಿದ್ದಾರೆ. ಇನ್ನು ಕೆಲವರು ಇದು ಆಕ್ಚ್ಯುವಲೀ ಚೆನ್ನಾಗಿರೋದು ಎಂದು ಕೊಂಡಾಡಿದ್ದಾರೆ.