Publish Date: Thu, 25 Nov 2021 (12:11 IST)
Updated Date: Thu, 25 Nov 2021 (12:14 IST)
ಹಾಸನ : ಸ್ಯಾಂಡಲ್ವುಡ್ ನಟ ಕಿಚ್ಚ ಸುದೀಪ್ ತಮ್ಮ ಸಾಮಾಜಿಕ ಕಾರ್ಯಗಳಲ್ಲಿ ಸದಾ ಮುಂದಿದ್ದಾರೆ.
ಅದಕ್ಕೆಂದೇ ಅವರು ಕಿಚ್ಚ ಸುದೀಪ್ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿದ್ದು, ಅದರ ಮೂಲಕ ಅಗತ್ಯವಿರುವವರಿಗೆ ಬೇಕಾದ ನೆರವನ್ನು ತಲುಪಿಸುವ ವ್ಯವಸ್ಥೆ ಕೈಗೊಂಡಿದ್ದಾರೆ. ಇತ್ತೀಚೆಗಷ್ಟೇ ಈ ಟ್ರಸ್ಟ್ ಮೂಲಕ ಮಳೆಯಿಂದ ಬೆಳೆ ಕಳೆದುಕೊಂಡ ರೈತರ ಪುತ್ರನೋರ್ವನಿಗೆ ಕಾಲೇಜು ಶಿಕ್ಷಣಕ್ಕೆ ಶುಲ್ಕ ಪಾವತಿಸಲಾಗಿದೆ. ಚಾರಿಟೇಬಲ್ನ ಈ ಕಾರ್ಯಕ್ಕೆ ಅಪಾರ ಮೆಚ್ಚುಗೆ ವ್ಯಕ್ತವಾಗಿದೆ. ಬಿಎಸ್ಸಿ ನರ್ಸಿಂಗ್ ಓದುತ್ತಿದ್ದ ಹಾಸನದ ವಿದ್ಯಾರ್ಥಿಯೋರ್ವ ಕಷ್ಟದಲ್ಲಿದ್ದರು. ಅವರಿಗೆ ಟ್ರಸ್ಟ್ ಮೂಲಕ ನೆರವು ನೀಡಲಾಗಿದೆ.
ಹಾಸನದಲ್ಲಿನ ಗಿರೀಶ್ ಕುಮಾರ್ ಮತ್ತು ಅವರ ಕುಟುಂಬ ಮಳೆಯಿಂದ ಬೆಳೆ ಕಳೆದುಕೊಂಡು ಸಂಕಷ್ಟದಲ್ಲಿದ್ದರು. ಪರೀಕ್ಷಾ ಶುಲ್ಕ ಕಟ್ಟಲಾಗದೆ ಹಾಸನದ ಕಿಚ್ಚಾ ಸುದೀಪ್ ಅಭಿಮಾನಿಗಳ ಸಂಘವನ್ನು ಗಿರೀಶ್ ಸಂಪರ್ಕ ಮಾಡಿದ್ದರು. ಬಿಎಸ್ಸಿ ನರ್ಸಿಂಗ್ ಓದುತ್ತಿರುವ ಗಿರೀಶ್ ಕುಮಾರ್ಗೆ ಕಾಲೇಜು ಶುಲ್ಕಕ್ಕೆ 21 ಸಾವಿರ ರೂಗಳ ಅಗತ್ಯವಿತ್ತು. ಕುಟುಂಬದ ಕಷ್ಟವನ್ನು ಆಲಿಸಿದ ಸುದೀಪ್ ಟ್ರಸ್ಟ್, ನೆರವಿಗೆ ಮುಂದಾಯಿತು. ಶುಲ್ಕ ಕಟ್ಟದೇ ಪರೀಕ್ಷೆ ಬರೆಯಲಾಗದ ಆತಂಕದಲ್ಲಿದ್ದ ವಿದ್ಯಾರ್ಥಿಯ ಆತಂಕ ದೂರ ಮಾಡಿ, ಚೆಕ್ ಮೂಲಕ ಹಣವನ್ನು ನೀಡಲಾಗಿದೆ.