Publish Date: Sat, 18 Aug 2018 (09:22 IST)
Updated Date: Sat, 18 Aug 2018 (09:26 IST)
ಬೆಂಗಳೂರು : ಕೊಡಗಿನಲ್ಲಿ ಧಾರಕಾರ ಮಳೆಯಿಂದಾಗಿ ಸಂಕಷ್ಟಕ್ಕೆ ಸಿಲುಕಿದ ಜನರ ನೆರವಿಗೆ ನಿಲ್ಲುವಂತೆ ಸ್ಯಾಂಡಲ್ ವುಡ್ ನ ನಟರಾದ ಸುದೀಪ್ ಹಾಗೂ ದರ್ಶನ್ ಅವರು ತಮ್ಮ ಅಭಿಮಾನಿಗಳಲ್ಲಿ ಮನವಿ ಮಾಡಿದ್ದಾರೆ.
ಧಾರಾಕಾರ ಮಳೆ ಹಾಗೂ ಜಲಾಶಯಗಳು ಭರ್ತಿಯಾಗಿರುವುದರ ಪರಿಣಾಮ ಕೊಡಗು ಜಿಲ್ಲೆ ಸಂಪೂರ್ಣವಾಗಿ ಜಲಾವೃತವಾಗುತ್ತಿದೆ. ಮನೆಗಳು ಕುಸಿಯುತ್ತಿದೆ. ಗುಡ್ಡಗಳು ಉರುಳುತ್ತಿದೆ. ಕೊಡಗಿನ ಜನರು ಮನೆ ಮಠ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ಕಷ್ಟಕರ ಪರಿಸ್ಥಿತಿ ನಿರ್ಮಾಣವಾಗಿದೆ. ಹಲವು ಜನರ ಪ್ರಾಣಹಾನಿ ಕೂಡ ಆಗಿದೆ. ಇದೀಗ ಕೊಡಗು ಜನರ ಕಷ್ಟಕ್ಕೆ ಸ್ಯಾಂಡಲ್ ವುಡ್ ನಟರಾದ ಸುದೀಪ್ ಹಾಗೂ ದರ್ಶನ್ ಅವರು ನೆರವಾಗುತ್ತಿದ್ದು, ಕೊಡಗಿನ ಜನತೆಗೆ ನೆರವು ನೀಡಿ ಎಂದು ಟ್ವಿಟ್ಟರ್ ನಲ್ಲಿ ಕೇಳಿಕೊಂಡಿದ್ದಾರೆ.
''ಕೊಡಗಿನ ಎಲ್ಲ ಜನರಿಗೆ ನಮ್ಮ ಸಹಾಯ ಮತ್ತು ಬೆಂಬಲ ಅಗತ್ಯವಿದೆ. ನಮ್ಮಿಂದ ಸಾಧ್ಯವಾದಷ್ಟು ಅವರಿಗೆ ನೆರವಾಗೋಣ. ನನ್ನ ಸಂಪೂರ್ಣ ಬೆಂಬಲ ಕೊಡಗಿನ ಜನರಿಗೆ ಇದೆ'' ಎಂದು ಟ್ವೀಟ್ ಮಾಡಿರುವ ದರ್ಶನ್ ಬೆಂಗಳೂರು ಮತ್ತು ಗೋಣಿಕೊಪ್ಪಲ್ ಪ್ರದೇಶದಲ್ಲಿರುವ ಸಹಾಯ ಕೇಂದ್ರಗಳ ವಿಳಾಸ ಹಂಚಿಕೊಂಡಿದ್ದಾರೆ. ಸಹಾಯ ಮಾಡಲು ಬಯಸುವವರು ದಯವಿಟ್ಟು ನೆರವು ನೀಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಹಾಗೇ ಕಿಚ್ಚ ಸುದೀಪ್ ಕೂಡ ಮನವಿ ಮಾಡಿಕೊಂಡಿದ್ದು, ''ನನ್ನ ಎಲ್ಲ ಅಭಿಮಾನಿ ಸಂಘಟನೆಗಳಿಗೂ ನನ್ನದೊಂದು ಕೋರಿಕೆ. ಮಳೆಯಲ್ಲಿ ಸಿಲುಕಿರುವ ಜನರಿಗೆ ಎಷ್ಟು ಸಾಧ್ಯವೋ ಅಷ್ಟು ಸಹಾಯ ಮಾಡಿ. ಇದು ನೀವು ನನಗೆ ನೀಡುವ ಬಹುದೊಡ್ಡ ಉಡುಗೊರೆ ಎಂದುಕೊಳ್ಳುತ್ತೇನೆ. ಅವರೆಲ್ಲರೂ ನಮ್ಮ ಜನ. ದಯವಿಟ್ಟು ನಿಮ್ಮಿಂದ ಆದಷ್ಟು ಸಹಾಯ ಮಾಡಿ. ಸರ್ಕಾರ ಕೂಡ ಈ ಬಗ್ಗೆ ಗಮನಿಸಿ ನೆರವು ನೀಡಿ'' ಎಂದು ಕೇಳಿಕೊಂಡಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ