Publish Date: Thu, 22 Mar 2018 (07:17 IST)
Updated Date: Thu, 22 Mar 2018 (07:20 IST)
ಬೆಂಗಳೂರು : ಗೋಲ್ಡನ್ ಸ್ಟಾರ್ ಗಣೇಶ್ ಅವರ ಜೊತೆ ‘ಮುಂಗಾರು ಮಳೆ-2 ‘ ಚಿತ್ರದಲ್ಲಿ ನಟಿಸಿದ ನಟಿ ಶಿಲ್ಪಾ ಮಂಜುನಾಥ್ ಅವರು ಇದೀಗ ಸ್ಯಾಂಡಲ್ ವುಡ್ ಮೇಲೆ ಕೋಪಗೊಂಡಿದ್ದು ಅದಕ್ಕೆ ಕಾರಣವೆನೆಂಬುದನ್ನು ತಿಳಿಸಿದ್ದಾರೆ.
ಈಗಾಗಲೇ ತಮಿಳು, ಮಲಯಾಳಂ ಸಿನಿಮಾಗಳ ಮೂಲಕ ಗುರುತಿಸಿಕೊಂಡಿರುವ ನಟಿ ಶಿಲ್ಪಾ ಮಂಜುನಾಥ್ ಅವರು ಕನ್ನಡದಲ್ಲಿ ಗಣೇಶ್ ಅವರ ಜೊತೆ ನಟಿಸಿದ ‘ಮುಂಗಾರು ಮಳೆ-2 ‘ ಚಿತ್ರ ಹೇಳಿಕೊಳ್ಳುವಂತಹ ಮಟ್ಟಿಗೆ ಯಶಸ್ಸು ಕಂಡಿರಲಿಲ್ಲ. ಆದ ಕಾರಣ ಅವರಿಗೆ ಕನ್ನಡಕ್ಕಿಂತ ಹೆಚ್ಚಾಗಿ ತಮಿಳು ಸಿನಿಮಾದಲ್ಲೇ ಅವಕಾಶಗಳು ಬರುತ್ತಿವೆಯಂತೆ. ಇದರಿಂದ ಕೋಪಗೊಂಡ ನಟಿ ಶಿಲ್ಪಾ ಮಂಜುನಾಥ್ ಅವರು ತಮಿಳು-ತೆಲುಗು ಚಿತ್ರರಂಗಕ್ಕೆ ಹೋಲಿಕೆ ಮಾಡಿದರೆ ಸ್ಯಾಂಡಲ್ ವುಡ್ ನಲ್ಲಿ ಗ್ಲಾಮರ್ ಗೆ ಹೆಚ್ಚು ಮಹತ್ವ ನೀಡುತ್ತಾರೆ ಎಂದು ಆರೋಪಿಸಿದ್ದಾರೆ.
ಈ ಬಗ್ಗೆ ಸ್ಥಳಿಯ ಪತ್ರಿಕೆಯೊಂದರಲ್ಲಿ ಮಾತನಾಡಿದ ಅವರು,’ ನನಗೆ ಸಂಬಂಧವಿಲ್ಲದ ಪಾತ್ರಗಳಿಗಾಗಿ ನಾನು ಹುಡುಕಾಡುತ್ತೇನೆ. ಅದೇ ನನಗೆ ಚಾಲೆಂಜಿಂಗ್. ಆದರೆ ಆ ರೀತಿಯ ಪಾತ್ರ ನಮ್ಮಂಥವರಿಗೆ ಸಿಗುವುದು ತೀರಾ ವಿರಳ. ಹಾಗೂ ಕನ್ನಡದಲ್ಲಿ ಅನುಭವಿ ಕಲಾವಿದರಿಗಿಂತ ಅನಾನುಭವಿ ಕಲಾವಿದರಿಗೆ ಹೆಚ್ಚಿನ ಅವಕಾಶಗಳನ್ನು ನೀಡಲಾಗುತ್ತಿದೆ. ಅನುಭವಿ ಕಲಾವಿದೆಯ ಸಿನಿಮಾ ಸೋತರೆ, ಅವಳನ್ನು ನೋಡುವ ರೀತಿಯೇ ಬೇರೆ. ಇಂಡಸ್ಟ್ರಿಯಲ್ಲಿ ಗೆದ್ದೆತ್ತಿನ ಬಾಲ ಹಿಡಿದಂತೆ, ಕೆಲವೊಂದಿಷ್ಟು ಮುಖಗಳಿಗೆ ಮಾತ್ರ ಮಣೆ ಹಾಕಲಾಗುತ್ತಿದೆ. ಹಿಟ್ ನಟಿ ಎಂಬ ಕಾರಣಕ್ಕೆ ಅವರಿಗೆ ಮೇಲಿಂದ ಮೇಲೆ ಪ್ರಯೋಗಾತ್ಮಕ ಪಾತ್ರ ನೀಡುತ್ತಾರೆ. ಹಾಗಂತ ಅವಕಾಶ ಕೊಡುವುದು ತಪ್ಪು ಅಂತಲೂ ಹೇಳುತ್ತಿಲ್ಲ. ಬೇರೆ ನಟಿಯರೂ ಇದ್ದಾರೆ. ಅವರನ್ನು ನೋಡಲಿ ಎಂಬುದು ನನ್ನ ಮಾತಿನ ಉದ್ದೇಶ' ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ
ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ